ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಸತ್ಯ ಕಲಿಸಿ, ಐಡಿಯಾಲಜಿ ಅಲ್ಲ: ಎಸ್.ಎಲ್.ಭೈರಪ್ಪ

ಪಠ್ಯಪುಸ್ತಕ ಪರಿಷ್ಕರಣೆ; ಪ್ರಶಸ್ತಿ ವಾಪಸಾತಿ ಪ್ರತಿಭಟನೆಯ ಇನ್ನೊಂದು ರೂಪ: ಎಸ್‌.ಎಲ್‌. ಭೈರಪ್ಪ
Last Updated 2 ಜೂನ್ 2022, 19:47 IST
ಅಕ್ಷರ ಗಾತ್ರ

ಮೈಸೂರು: ‘ಸತ್ಯವನ್ನು ಹುಡುಕಿ ಪಠ್ಯಕ್ರಮದಲ್ಲಿ ಅಳವಡಿಸಿ ಮಕ್ಕಳಿಗೆ ಕಲಿಸಬೇಕೇ ಹೊರತು, ಐಡಿಯಾಲಜಿಗಳನ್ನು ಕಲಿಸಬಾರದು’ ಎಂದು ಕಾದಂಬರಿಕಾರ ಎಸ್.ಎಲ್.ಭೈರಪ್ಪಗುರುವಾರ ಪ್ರತಿಪಾದಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪಠ್ಯಕ್ರಮ ಪರಿಷ್ಕರಣೆ ಕುರಿತು ಕೆಲವರ ಗಲಾಟೆ, ತಗಾದೆಗಳಿಂದ ಸರ್ಕಾರದ ಮೇಲೆ ಸಹಜವಾಗಿಯೇ ಒತ್ತಡ ಹೆಚ್ಚಿದೆ’ ಎಂದು ಹೇಳಿದರು.

‘ಶಿಕ್ಷಣ ‌ಸಚಿವ ಬಿ.ಸಿ.ನಾಗೇಶ್‌ ಅವರ ಮನೆಗೆ ಕೆಲವರು ಬೆಂಕಿ ಹಚ್ಚುವುದನ್ನು ಪೊಲೀಸರು ತಪ್ಪಿಸಿದ್ದಾರೆ. ಬೆಂಬಲವಿದ್ದವರೇ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಹೀಗಾದರೆ, ದೇಶದಲ್ಲಿ ಏಕತೆ ಬರುವುದು ಯಾವಾಗ? ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ಯಾವಾಗ’ ಎಂದರು.

‘ಮೋದಿ ಪ್ರಧಾನಿಯಾದ ನಂತರ ನಡೆದಿದ್ದ ಪ್ರಶಸ್ತಿ ವಾಪಸ್ ಚಳವಳಿ ಚಳವಳಿ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಪಠ್ಯ ವಾಪಸ್‌ ಅದರ ಇನ್ನೊಂದು ರೂಪವಷ್ಟೆ. ಪ್ರಶಸ್ತಿ ವಾಪಸು ನೀಡುವವರು ಪ್ರಶಸ್ತಿ ಹಣವನ್ನೂ ವಾಪಸು ಕೊಡಬೇಕೆಂದು ಆಗ ಪ್ರತಿಪಾದಿಸಿದ್ದೆ’ ಎಂದರು.

‘ಪಠ್ಯ ಪರಿಷ್ಕರಣೆ ಅಥವಾ ಈಗ ಸೇರಿಸಿರುವ ಪಠ್ಯವನ್ನು ವಾಪಸ್‌ ಪಡೆಯಬೇಕೋ, ಬೇಡವೋಎಂಬ ವಿಷಯದಲ್ಲಿ ಯಾವ ಸಲಹೆಯನ್ನೂ ಕೊಡುವುದಿಲ್ಲ’ ಎಂದಷ್ಟೆ
ಪ್ರತಿಕ್ರಿಯಿಸಿದರು.

‘ಯಾವುದು ಪರಿಪೂರ್ಣ?’

‘ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಗೆಸಂಬಂಧಿಸಿದ ಸಂಸ್ಥೆಯಲ್ಲೇ ಕೆಲಸ ಮಾಡಿದವ ನಾನು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು, ಪಠ್ಯಕ್ರಮ ಪರಿಷ್ಕರಣೆ, ರಾಷ್ಟ್ರೀಯ ಏಕತೆಗೆ ಮುಂದಾಗಿ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಪಾರ್ಥಸಾರಥಿ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ನನ್ನನ್ನೂ ಸೇರಿಸಿ ಐವರು ಸದಸ್ಯರ ಸಮಿತಿ ರಚಿಸಿದ್ದರು’.

‘ನಮ್ಮ ಪಠ್ಯಕ್ರಮ ಕಲುಷಿತವಾಗಿದ್ದು, ಸ್ವಚ್ಛಗೊಳಿಸಬೇಕಾಗಿದೆ’ ಎಂದು ಪಾರ್ಥಸಾರಥಿ ಹೇಳಿದ್ದರು. ಹಾಗೆಂದರೇನು ಎಂದು ಕೇಳಿದ್ದೆ. ಔರಂಗಜೇಬ್‌ ದೇಗುಲ‌ ಕೆಡವಿದ, ಕಾಶಿಯಲ್ಲಿ ಮಸೀದಿ ಕಟ್ಟಿದ ಎಂದೆಲ್ಲಾ ಪಠ್ಯದಲ್ಲಿದೆ; ಅವನ್ನೆಲ್ಲ ತೆಗೆಯಬೇಕು. ಮಕ್ಕಳ ಮನಸ್ಸಿನಲ್ಲಿ ಅವೆಲ್ಲವನ್ನು ಬಿತ್ತುವುದು ಬೇಕಾ ಎಂದು ಕೇಳಿದ್ದರು. ಮಸೀದಿ ಎದುರಿನ ಬಸವಣ್ಣ ಮೂರ್ತಿ ಮಸೀದಿ ನೋಡುತ್ತಾ ಕುಳಿತಿದ್ದರೆ ಅಲ್ಲಿ ದೇವಸ್ಥಾನವಿತ್ತು ಎಂದೇ ಅರ್ಥ ಎಂದು ತಿಳಿಸಿದ್ದೆ. ನನ್ನ ಪ್ರಶ್ನೆಗೆ ಉತ್ತರಿಸಲು ಅವರಿಗೆ ಆಗಿರಲಿಲ್ಲ. ಅದಾಗಿ 15 ದಿನದಲ್ಲಿ ಸಮಿತಿಯಿಂದ ನನ್ನನ್ನು ತೆಗೆದು ಕಟ್ಟಾ ಕಮ್ಯುನಿಸ್ಟ್‌ ಒಬ್ಬರನ್ನು ಹಾಕಿದ್ದರು.‌ ಬಳಿಕ ಪಠ್ಯಕ್ರಮ ಪರಿಷ್ಕರಿಸಲಾಯಿತು. ಹೀಗಾದಾಗ, ಯಾವ ಪಠ್ಯಕ್ರಮ ಪರಿಪೂರ್ಣ (ಐಡಿಯಲ್) ಅಥವಾ ಪ್ರಾಮಾಣಿಕ ಎನ್ನುವ ಪ್ರಶ್ನೆ ಬರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT