ಬೆಳಗಾವಿ: ಅಚ್ಚುಕಟ್ಟು ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ಅಕ್ಕಪಕ್ಕದ ಸಾವಿರಾರು ಎಕರೆ ಭತ್ತ ಮೊದಲಾದ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.
ತಾಲ್ಲೂಕಿನ ಉಚಗಾಂವ, ಹಿಂಡಲಗಾ, ಅಂಬೇವಾಡಿ, ಕಂಗ್ರಾಳಿ ಕೆ.ಎಚ್., ಅಲತಗಾ, ಕಡೋಲಿ, ಜಾಫರವಾಡಿ, ಕಾಕತಿ ಮೊದಲಾದ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಕೃಷಿ ಜಮೀನುಗಳು ಮುಳುಗಡೆಯಾಗಿವೆ. ಕೆರೆಯಂತೆ ಕಾಣಿಸುತ್ತಿವೆ.
ಮಳೆಗಾಲ ಆರಂಭ ಆದಾಗಿನಿಂದ 2ನೇ ಬಾರಿಗೆ ಬೆಳೆಗಳು ಮುಳುಗಿವೆ. ಆದರೆ, ಈ ಬಾರಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹೀಗೆಯೇ ಹಲವು ದಿನಗಳವರೆಗೆ ನೀರು ನಿಂತರೆ ಬೆಳೆ ಸಂಪೂರ್ಣ ಹಾಳಾಗುವ ಆತಂಕ ರೈತರದಾಗಿದೆ.
ಹೋದ ವರ್ಷ ಅತಿವೃಷ್ಟಿ ಹಾಗೂ ಪ್ರವಾಹದಿಂದ ಈ ಭಾಗದ ರೈತರು ಬೆಳೆ ಕಳೆದುಕೊಂಡು ಅಪಾರ ನಷ್ಟ ಅನುಭವಿಸಿದ್ದರು.
ತಾಲ್ಲೂಕಿನ ಬರ್ಡೇ ಧಾಬಾ ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನೀರು ಸಂಗ್ರಹವಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.