ಬೆಂಗಳೂರು: ಕೊರೊನಾ ಸೋಂಕಿತರಾಗಿರುವ ಕವಿ ಸಿದ್ದಲಿಂಗಯ್ಯ ಅವರಿಗೆ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಸಿ) ಚಿಕಿತ್ಸೆ ಮುಂದುವರೆದಿದೆ.
ನಾಲ್ಕು ದಿನಗಳ ಹಿಂದೆ ಸೋಂಕಿತರಾಗಿದ್ದ ಅವರಿಗೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರ ಪತ್ನಿ ಹಾಗೂ ಕಾರು ಚಾಲಕ ಕೂಡ ಕೋವಿಡ್ ಪೀಡಿತರಾಗಿದ್ದಾರೆ. ಪತ್ನಿಗೆ ಚಾಮರಾಜಪೇಟೆಯಲ್ಲಿರುವ ರಂಗದೊರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಕಾರು ಚಾಲಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
‘ಕೋವಿಡ್ ನ್ಯೂಮೋನಿಯಾದಿಂದ ಬಳಲುತ್ತಿರುವ ಸಿದ್ದಲಿಂಗಯ್ಯ ಅವರಿಗೆ ಕೃತಕ ಉಸಿರಾಟದ ಸಂಪರ್ಕ ಒದಗಿಸಲಾಗಿದೆ. ಅವರು ತೀವ್ರವಾಗಿ ಅಸ್ವಸ್ಥರಾಗಿದ್ದು, ತಜ್ಞ ವೈದ್ಯರ ತಂಡವು ಅವರ ಆರೋಗ್ಯದ ಬಗ್ಗೆ ನಿರಂತರ ಮೇಲ್ವಿಚಾರಣೆ ಮಾಡುತ್ತಿದೆ’ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.