ರಾಯಚೂರು: ಜಿಲ್ಲೆಯ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು ಆಯುಧ ಪೂಜಾ ದಿನದಂದು ಮಂಗಳವಾರ ತುಪಾಕಿಯಿಂದ ಗಾಳಿಯಲ್ಲಿ ಗುಂಡುಹಾರಿಸಿದ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ.
ಅರಕೇರಾ ಗ್ರಾಮ ಸ್ವಗೃಹದ ಮೇಲ್ಚಾವಣಿಯಲ್ಲಿನಿಂತು, ತುಪಾಕಿಯನ್ನು ಹೆಗಲ ಮೇಲೆ ಇರಿಸಿಕೊಂಡು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಬಂದೂಕು ಪರವಾನಿಗೆದಾರರು ವಿನಾಕಾರಣ ಗುಂಡು ಹಾರಿಸಿದರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ. ಸ್ವತಃ ಶಾಸಕರೇ ಕಾನೂನು ಪಾಲಿಸದೆ ಗುಂಡು ಹಾರಿಸಿದ್ದಾರೆ. ಪೊಲೀಸರು ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನೆ ಎತ್ತಿದ್ದಾರೆ.
ದೇವದುರ್ಗ ಜೆಡಿಎಸ್ ನಾಯಕಿ ಕರೆಮ್ಮ ಅವರು ಈ ಬಗ್ಗೆ ಮಾತನಾಡಿ, 'ಕಾನೂನು ಪಾಲಕರೆ ಕಾನೂನು ಮುರಿದಿದ್ದಾರೆ. ಯಾರನ್ನು ಹೆದರಿಸಲು ಶಾಸಕ ಗಾಳಿಯಲ್ಲಿ ಮೂರು ಸುತ್ತು ಗುಂಡುಸಿಡಿಸಿದ್ದಾರೆ ಗೊತ್ತಿಲ್ಲ. ಶಾಸಕರ ಈ ವರ್ತನೆಯಿಂದ ಜನರು ಅವರ ಮನೆಗೆ ಸಮಸ್ಯೆ ಹೇಳಿಕೊಳ್ಳಲು ಹೋಗುವುದಕ್ಕೆ ಹೆದರುತ್ತಿದ್ದಾರೆ' ಎಂದರು.
***
'ಗುಂಡು ಹಾರಿಸಿದ ಹಳೇ ವಿಡಿಯೋ ಈಗ ಯಾರೋಸೋಷಿಯಲ್ ಮಿಡಿಯಾದಲ್ಲಿ ಹಂಚಿದ್ದಾರೆ. ಗ್ರಾಮೀಣ ಸಂಪ್ರದಾಯದಲ್ಲಿ ಇದು ಮೊದಲು ಇತ್ತು. ಈಗ ಗುಂಡು ಹಾರಿಸುವುದನ್ನು ಬಿಟ್ಟಿದ್ದೇವೆ. ಬಹುಶಃ ಅದು 2017ರ ವಿಡಿಯೋ ಇರಬಹುದು' ಎಂದು ಶಾಸಕ ಶಿವನಗೌಡ ನಾಯಕ 'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದರು.