ಬೆಂಗಳೂರು: ಕಲಾಪದ ವೇಳೆ ಸಚಿವರು ಸಕಾಲಕ್ಕೆ ಹಾಜರಾಗದ ಬಗ್ಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿದರು.
ಈ ರೀತಿ ಆದರೆ ಸದನವನ್ನು ನಡೆಸುವುದಾದರೂ ಹೇಗೆ? ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಸಚಿವರಲ್ಲಿ ಬಂದರೆ ಶೋಭೆ ತರುವುದಿಲ್ಲ ಎಂದರು. ಪ್ರಶ್ನೋತ್ತರ ವೇಳೆ ಕಾಂಗ್ರೆಸ್ನ ರಾಜೇಗೌಡ ಅವರ ಪ್ರಶ್ನೆ ಕರೆದಾಗ ಉತ್ತರ ಹೇಳಬೇಕಿದ್ದ ಕ್ರೀಡಾ ಸಚಿವ ನಾರಾಯಣ ಗೌಡ ಅವರು ಹಾಜರಿರಲಿಲ್ಲ.
ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಮಂತ್ರಿ ಆಗುವುದಕ್ಕೆ ಮೊದಲು ಲಾಬಿ ಮಾಡುತ್ತಾರೆ. ಮಂತ್ರಿ ಆದ ಮೇಲೆ ಸದನಕ್ಕೆ ಬರುವುದಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು. ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.