ಬೆಂಗಳೂರು: ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳು ತಮ್ಮ ಆದಾಯದ ನಿರ್ದಿಷ್ಟ ಭಾಗವನ್ನು ಕೋವಿಡ್ನಿಂದ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರಿಗೆ ಆಹಾರ ಮತ್ತು ವೈದ್ಯಕೀಯ ಸೇವೆ ಒದಗಿಸಲು ಬಳಕೆ ಮಾಡಬೇಕು ಎಂದು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನವಿ ಮಾಡಿದ್ದಾರೆ.
ಈ ಸಂಬಂಧ ಬುಧವಾರ ಎಲ್ಲ ವಕ್ಫ್ ಸಂಸ್ಥೆಗಳ ಮುಖ್ಯಸ್ಥರಿಗೂ ಸುತ್ತೋಲೆ ಹೊರಡಿಸಿರುವ ಅವರು, ಈಗಾಗಲೇ ಕೆಲವು ವಕ್ಫ್ ಸಂಸ್ಥೆಗಳು ಕೋವಿಡ್ನಿಂದ ಸಂಕಷ್ಟಕ್ಕೊಳಗಾದ ಜನರಿಗಾಗಿ ತಮ್ಮ ಸಂಪನ್ಮೂಲವನ್ನು ಬಳಕೆ ಮಾಡುತ್ತಿವೆ. ಉಳಿದ ಸಂಸ್ಥೆಗಳೂ ವಕ್ಫ್ ಸಂಸ್ಥೆಗಳ ಬೈಲಾ ಪ್ರಕಾರವೇ ಈ ದಿಸೆಯಲ್ಲಿ ಹಣ ಖರ್ಚು ಮಾಡಬೇಕು ಎಂದು ಕೋರಿದ್ದಾರೆ.
ಸಂಕಷ್ಟದಲ್ಲಿರುವ ಜನರಿಗೆ ಆಹಾರ ಧಾನ್ಯ ವಿತರಣೆ, ಅವಶ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ಹಣ ಬಳಕೆ ಮಾಡಬಹುದು. ಪಾರದರ್ಶಕ ರೀತಿಯಲ್ಲಿ ಹಣ ವೆಚ್ಚ ಮಾಡಬೇಕು ಮತ್ತು ಸಮರ್ಪಕವಾದ ಲೆಕ್ಕಪತ್ರಗಳನ್ನು ಇರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಭಾಂಗಣ, ಭವನಗಳ ಬಳಕೆ: ವಕ್ಫ್ ಸಂಸ್ಥೆಗಳ ಅಧೀನದಲ್ಲಿರುವ ಶಾದಿ ಮಹಲ್ಗಳು, ಸಮುದಾಯ ಭವನಗಳು ಮತ್ತು ಖಾಲಿ ನಿವೇಶನಗಳನ್ನು ಕೋವಿಡ್ ಸಹಾಯ ಕೇಂದ್ರ ತೆರೆಯವುದು ಹಾಗೂ ಕೋವಿಡ್ ಲಸಿಕೆ ಹಾಕುವುದಕ್ಕೆ ಒದಗಿಸಿಬೇಕು ಎಂದೂ ಮತ್ತೊಂದು ಸುತ್ತೋಲೆಯಲ್ಲಿ ಮನವಿ ಮಾಡಲಾಗಿದೆ.
ಕೋವಿಡ್ ಸಂಬಂಧಿ ಮುನ್ನೆಚ್ಚರಿಕೆ ವಹಿಸುವುದು, ಸೋಂಕಿತರಿಗೆ ಚಿಕಿತ್ಸೆ ಒದಗಿಸುವುದು ಹಾಗೂ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಸೀದಿಗಳ ಧ್ವನಿವರ್ಧಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದು ಮನವಿ ಮಾಡಿದ್ದಾರೆ.