ಕುದುರಿಮೋತಿ (ಕೊಪ್ಪಳ): ‘ಪರಿಶಿಷ್ಟರಲ್ಲದ ವೀರಶೈವ ಲಿಂಗಾಯತ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಅಲೆಮಾರಿ ಸಮುದಾಯದವರು ಎತ್ತಿರುವ ಆಕ್ಷೇಪದ ಬಗ್ಗೆ ಚರ್ಚಿಸಲು ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು’ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲೆಯ ಕುಕನೂರು ತಾಲ್ಲೂಕಿನ ಕುದುರಿಮೋತಿ ಗ್ರಾಮದಲ್ಲಿ ಮಂಗಳವಾರ ನಡೆದ ಅಲೆಮಾರಿ ಬೇಡ, ಬುಡ್ಗ, ಜಂಗಮರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು ’ನಿಮ್ಮ ಬದುಕಿನ ಸ್ಥಿತಿಗತಿ ಖುದ್ದು ನೋಡಿದ್ದೇನೆ. ಅಲೆಮಾರಿಗಳ ಸಮಾಜದ ಪ್ರಮುಖರ ಸಭೆ ನಡೆಸಿ ಸಮಸ್ಯೆ ಪರಿಹಾರ ಮಾಡಲಾಗುವುದು’ ಎಂದರು.
ಇದಕ್ಕೂ ಮೊದಲು ಮಾತನಾಡಿದ ರಾಜ್ಯ ಬೇಡ, ಬುಡ್ಗ ಜಂಗಮ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಣ್ಣ ಮಾರೆಪ್ಪ ‘ಲಿಂಗಾಯತ ಜಂಗಮರು ನೀಡಿದ ಭಿಕ್ಷೆಯನ್ನು ತಿಂದುಕೊಂಡು ನಾವು ಬದುಕಿದ್ದೇವೆ. ನಮ್ಮ ಅನ್ನ ಕಿತ್ತುಕೊಳ್ಳಲು ಬೇರೆಯವರಿಗೆ ಅವಕಾಶ ಕೊಡಬಾರದು’ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ ‘ವಕೀಲ ಬಿ.ಡಿ. ಹಿರೇಮಠ ಅಲೆಮಾರಿಗಳ ಅನ್ನಕ್ಕೆ ಕೈ ಹಾಕಿದ್ದಾರೆ. ಅಲೆಮಾರಿಗಳು ತಿನ್ನುವ ಮಾಂಸದ ಆಹಾರವನ್ನು ಅವರು ತಿಂದು ತೋರಿಸಲಿ. ಹುಸಿ ಹಕ್ಕು ಕೇಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲ’ ಎಂದು ಕಿಡಿಕಾರಿದರು.