ತುಮಕೂರು: ‘ಬಿಜೆಪಿ ಸರ್ಕಾರದಲ್ಲಿ ನಾನು ಇರುವವಳು ಒಬ್ಬಳೇ ಮಹಿಳಾ ಸಚಿವೆ. ನಾನೇ ಏಕೆ ತ್ಯಾಗ ಮಾಡಬೇಕು. ಎರಡು ಬಾರಿಯ ಸಚಿವ ಸಂಪುಟ ವಿಸ್ತರಣೆಯ ವಿಚಾರ ಬಂದಾಗಲೂ ನನ್ನ ಮಾತ್ರ ಗುರಿ ಮಾಡಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸಂಘಟನೆಯಿಂದ ಮೂಲಕ ಬಂದವಳು. ಸಚಿವ ಸ್ಥಾನ ತ್ಯಾಗದ ವಿಚಾರವಾಗಿ ನನಗೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಂದ ಯಾವುದೇ ಸೂಚನೆಗಳೂ ಬಂದಿಲ್ಲ. ಆದರೂ ತ್ಯಾಗದ ವಿಚಾರದಲ್ಲಿ ನನ್ನ ಹೆಸರು ಮಾಧ್ಯಮಗಳಲ್ಲಿ ಕೇಳಿ ಬರುತ್ತದೆ. ಮಾಧ್ಯಮಗಳಲ್ಲಿ ಈ ಹಿಂದೆ ಎರಡು ಬಾರಿ ನನ್ನ ಹೆಸರು ಬಂದಾಗಲೂ ಈ ಸುದ್ದಿ ಸುಳ್ಳಾಗಿತ್ತು. ಮೂರನೇ ಬಾರಿಯೂ ಸುಳ್ಳಾಗಲಿದೆ. ಏಕೆ ಮಹಿಳೆಯರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
‘ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಎಂದಿಗೂ ಬದ್ಧ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.