ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ನಿಯಮ ರಚನೆಯಾಗದೆ ಹುದ್ದೆ ಭರ್ತಿಗೆ ಮುಂದಾದ ಕನ್ನಡ ವಿ.ವಿ: ಆರ್‌ಟಿಐ

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾಹಿತಿ ಕೇಳಿದ ಸಮಾಜ ಕಲ್ಯಾಣ ಇಲಾಖೆ
Last Updated 2 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸದೇ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು 17 ಬೋಧಕ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.

2018ರಲ್ಲಿ ಯುಜಿಸಿಯ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಅದಕ್ಕೆ ಪೂರಕವಾಗಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ವಿಶ್ವವಿದ್ಯಾಲಯ ರಚಿಸಬೇಕು. ಬಳಿಕ ಅದನ್ನು ವಿಶ್ವವಿದ್ಯಾಲಯದ ವೆಬ್‌ಸೈಟಿನಲ್ಲಿ ಪ್ರಕಟಿಸಿ, ಆಕ್ಷೇಪಣೆಗೆ ಕಾಲಾವಕಾಶ ನೀಡಬೇಕು. ಅನಂತರ ರಾಜ್ಯಪಾಲರಿಂದ ಅನುಮೋದನೆ ಪಡೆಯಬೇಕು. ಆದರೆ, ಇದ್ಯಾವ ಕೆಲಸ ಮಾಡದೆ ಹುದ್ದೆಗಳನ್ನು ತುಂಬಲು ವಿಶ್ವವಿದ್ಯಾಲಯ ಮುಂದಾಗಿದೆ.

‘ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇರ ನೇಮಕಾತಿಗಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಲಾಗಿಲ್ಲ’ ಎಂದು ಸ್ವತಃ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿಯ ಎಂ.ಎಚ್‌. ಬಸವರಾಜು ಎಂಬುವರಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ ಮಾಹಿತಿ ಕೊಟ್ಟಿದ್ದಾರೆ. ಆದರೆ, ವಾಸ್ತವದಲ್ಲಿ 1993 ಮತ್ತು 2017ರಲ್ಲಿ ನೇಮಕಾತಿ ಪರಿನಿಯಮವನ್ನು ವಿಶ್ವವಿದ್ಯಾಲಯ ರಚಿಸಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಒಂದುವೇಳೆ ವೃಂದ ನೇಮಕಾತಿ ನಿಯಮಗಳು ಆಗದೇ ಇದ್ದರೆ ‘ಮಿಸ್ಸಿಂಗ್‌ ರೋಸ್ಟರ್‌’ ತೋರಿಸಿ ಹುದ್ದೆಗಳನ್ನು ಹೇಗೆ ಗುರುತಿಸಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಕುರಿತು ‘ಪ್ರಜಾವಾಣಿ’ ಕುಲಸಚಿವರನ್ನು ಪ್ರಶ್ನಿಸಿದಾಗ, ‘ಈ ಹಿಂದೆ ವೃಂದ ಮತ್ತು ನೇಮಕಾತಿ ನಿಯಮ ರಚಿಸಲಾಗಿದೆ’ ಎಂದು ಹೇಳಿಕೆ ಕೊಟ್ಟಿದ್ದಾರೆ.

ಬೋಧಕ ಹುದ್ದೆಗಳ ಅರ್ಜಿ ಪರಿಶೀಲನಾ ಸಮಿತಿಯ ಸದಸ್ಯರಾಗಿದ್ದ ಎಂ. ಮಲ್ಲಿಕಾರ್ಜುನಗೌಡ ಹೊಸ ವೃಂದ ನೇಮಕಾತಿಗೆ ಸಂಬಂಧಿಸಿದ ನಿಯಮಗಳ ಮಾಹಿತಿ ಪುಸ್ತಕ ಕೊಡಬೇಕೆಂದು ಕೇಳಿದ್ದ ಕಾರಣಕ್ಕಾಗಿಯೇ ಅವರನ್ನು ಬೇರೆಡೆ ವರ್ಗಾವಣೆಗೊಳಿಸಲಾಗಿದೆ ಎಂಬ ಆರೋಪ ಇದೆ.

ಮಾಹಿತಿ ಕೇಳಿದ ಸಮಾಜ ಕಲ್ಯಾಣ ಇಲಾಖೆ:

ಮೀಸಲಾತಿ ಕುರಿತು ಇತ್ತೀಚೆಗೆ ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿ ಹಾಗೂ ದೂರುಗಳು ಬಂದಿರುವುದರಿಂದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ವಿಶ್ವವಿದ್ಯಾಲಯದ ವೃಂದ ಮತ್ತು ನೇಮಕಾತಿ ನಿಯಮಗಳು (ತಿದ್ದುಪಡಿಗಳು), ಬೋಧಕ ವೃಂದದ ಹುದ್ದೆ ದಾಖಲಾತಿ ಪುಸ್ತಕ, ಬೋಧಕ ವೃಂದದ ರೋಸ್ಟರ್‌ ದಾಖಲಾತಿ ಪುಸ್ತಕ, ಬೋಧಕ ವೃಂದದ ಮಂಜೂರಾದ ಆದೇಶ ಪ್ರತಿಗಳು, ಹುದ್ದೆ ಭರ್ತಿಯ ಅಧಿಸೂಚನೆಗೆ ಸಂಬಂಧಿಸಿದ ದಾಖಲೆಗಳನ್ನು ಕಳಿಸಿಕೊಡಬೇಕೆಂದು ಸೂಚಿಸಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಆಯಾ ಪ್ರವರ್ಗವಾರು ನೇಮಕಗೊಂಡು ನಿವೃತ್ತಿಯಾದವರ ವಿವರವನ್ನು ಬೋಧಕ ವೃಂದದ ಹುದ್ದೆ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. ಆದರೆ, ಇದುವರೆಗೆ ಆ ದಾಖಲಾತಿ ಪುಸ್ತಕವನ್ನೇ ನಿರ್ವಹಣೆ ಮಾಡಿಲ್ಲ. ರೋಸ್ಟರ್‌ ದಾಖಲಾತಿ ಪುಸ್ತಕವೂ ಇಲ್ಲ. ಹೀಗಿರುವಾಗ ನೇಮಕ ಪ್ರಕ್ರಿಯೆ ಯಾವ ನಿಯಮವನ್ನು ಅನುಸರಿಸಿ ಮಾಡುತ್ತಿದ್ದಾರೆ ಎನ್ನುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT