ಯಳಂದೂರು: ಕಾನನದಲ್ಲಿ ಕಿರು ಜಲಪಾತಗಳ ವೈಭವ

ಯಳಂದೂರು: ಹಿಂಗಾರು ಮಳೆಯ ಹಾಡು ಗಿರಿ ಶಿಖರಗಳನ್ನು ಈಗ ಮುದ್ದಾಡುತ್ತಿದೆ. ಧರೆಗೆ ಮುತ್ತಿಡುವ ಪ್ರತಿ ಹನಿಯೂ ಪ್ರಕೃತಿ ಮಾತೆಗೆ ನವೋಲ್ಲಾಸ ತುಂಬಿದೆ. ಎತ್ತ ನೋಡಿದರತ್ತ ಬೆಟ್ಟ, ಗುಡ್ಡ, ಕಣಿವೆ ಮತ್ತು ಕಾನು ಹಸಿರು ಹೊದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಅಡವಿಯ ಅಂಕುಡೊಂಕು ಹಾದಿಯಲ್ಲಿ ಹರಿಯುವ ಹನಿಹನಿಯೂ ಗುಡ್ಡದ ಬಂಡೆ ಮೇಲೆ ಏರುತ್ತ, ಇಳಿಯುತ್ತ ನಾಟ್ಯ ಮಾಡುತ್ತಿದೆ. ನೀರ ಹನಿಗಳು ಅಲ್ಲಲ್ಲಿ ಜಲಧಾರೆ ಹರಿಸುವಾಗ ಸೃಷ್ಟಿಸುವ ಕಿರು ಜಲಪಾತಗಳು ಅನನ್ಯ ಅನುಭೂತಿಯನ್ನು ನೀಡುತ್ತಿವೆ.
ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ನಕ್ಷತ್ರಗಳು ಪರಿಸರಕ್ಕೆ ತಂಪು ತುಂಬಲಿಲ್ಲ. ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ ಮಳೆಗಳು ಹುಟ್ಟಿದಷ್ಟೇ ವೇಗದಲ್ಲಿ ಕಣ್ಮರೆಯಾದವು. ಮೃಗಾಶಿರದಿಂದ ಹಸ್ತ ತನಕ ಅಲ್ಪ ಪ್ರಮಾಣದ ಮಳೆ ಮಾರುತಗಳು ನೆಲ, ಜಲವನ್ನು ತೋಯಿಸಿ ಓಡಿ ಹೋದವು. ಹಿಂಗಾರು ಮಾರುತಗಳು ವರುಣನ ಆಗಮನವನ್ನು ಸಾರಿತು. ಈ ನಡುವೆ ವಿಶಾಖ ಅಬ್ಬರದಿಂದಲೇ ಧರೆ ಅಪ್ಪಿ ನೀರ ಹಾಡು ಹಾಡಿದೆ. ನಾಡು ಕಾಡಿನ ಸುತ್ತ ಹನಿಗಳ ಜೋಗುಳ ತುಸು ಹೆಚ್ಚಾಗಿ ಕೇಳಿಬಂದಿದೆ. ಬಂಡೆಗಳ ಸಂದುಗಳಲ್ಲಿ, ಇಳಿಜಾರಿನ ಕಿರು ಹಾದಿಗಳಲ್ಲಿ ಧುಮ್ಮಿಕ್ಕುತ್ತಾ ಪುಟ್ಟ ಜಲಪಾತಗಳನ್ನು ಸೃಷ್ಟಿಸಿದೆ.
ಸೆಪ್ಟೆಂಬರ್ ಮಾಸದಲ್ಲಿ ಬಣಗುಟ್ಟುತ್ತಿದ್ದ ಪ್ರದೇಶಗಳಲ್ಲಿ ಜಲನಾಡಿ ಕಟ್ಟೆ ಹೊಡೆದಿದೆ. ರಸ್ತೆ ಬದಿ ಇಣುಕಿದರೆ ಜಲಲಧಾರೆ ಸದ್ದು ಕಿವಿಗಪ್ಪಳಿಸುತ್ತಿದೆ.
ಜಲ ದೇವಿಯ ನರ್ತನ ಪ್ರವಾಸಿ ತಾಣಗಳ ಸ್ವರೂಪ ಪಡೆಯುತ್ತಿದೆ. ಅರಣ್ಯದ ಸುತ್ತಲ ನಿಸರ್ಗ ತಂಪಾದಂತೆ, ಸುತ್ತಲೂ ತೇವಾಂಶ ಭರಿತ ವಾಯು ಮೈ, ಮನಕ್ಕೆ ಮುದ ನೀಡುತ್ತಿದೆ. ಈ ಸಮಯ ತುಂತುರು ಮಳೆಯಾದರೂ ವಸುಂಧರೆ ಪ್ರತಿ ಹನಿಗೆ ಕೆಳ ಪಾತ್ರದ ಜಲಾವರದ ದಿಕ್ಕು ತೋರುತ್ತಾಳೆ. ಕಲ್ಲಿನ ಕಿಂಡಿಗಳಿಂದ, ಬಂಡೆಗಳ ಬದಿಯಿಂದ ಧುಮ್ಮಿಕ್ಕುವ ಪುಟ್ಟಪುಟ್ಟ ಜಲಪಾತಗಳ ವೈಭವವನ್ನು ವೀಕ್ಷಿಸುವುದೇ ನಯನ ಮನೋಹರ ಎನ್ನುತ್ತಾರೆ ಪ್ರವಾಸಿ ಪ್ರಿಯರು.
‘ಬಿಆರ್ಟಿ ಕಾಡು-ಮೇಡುಗಳಲ್ಲಿ ನೂರಾರು ಜಲಪಾತಗಳಿವೆ. ಅತಿ ಮಳೆ ಬೀಳುವ ಪ್ರದೇಶಗಳಲ್ಲಿ ಜಲಧಾರೆ ಕಾನನದ ನಡುವೆ ಅದೃಶ್ಯವಾಗಿರುತ್ತವೆ. 25ಕ್ಕೂ ಹೆಚ್ಚು ಹಳ್ಳಗಳು, ಸದಾ ಜಿನುಗುವ ಕೊಳ್ಳಗಳು ಇಲ್ಲಿವೆ. ಮಳೆಗಾಲದಲ್ಲಿ ಹುಟ್ಟುವ ಝರಿತೊರೆಗಳಿಗೆ ಲೆಕ್ಕ ಇಟ್ಟವರಿಲ್ಲ. ಇಳಿಜಾರು ಪ್ರದೇಶದಲ್ಲಿ ನೀರಿನ ಬುಗ್ಗೆಗಳು ಸಕ್ರಿಯವಾಗಿವೆ. ಇವು 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸುತ್ತವೆ. ಬೆಳ್ಳಟ್ಟ ಮತ್ತು ಕೃಷ್ಣಯ್ಯನಕಟ್ಟೆ ಸರೋವರಗಳ ಆಕರ್ಷಣೆಯನ್ನು ಮಳೆ ಕಾಡಿನ ಜೀವ ತೊರೆಗಳೇ ಹೆಚ್ಚಿಸಿವೆ. ಈ ಸಮಯ ಜಲಪಾತಗಳ ಜಾಡಿನಲ್ಲಿ ಸಾವಿರಾರು ಸಸ್ಯ ಪ್ರಭೇದಗಳು ಕಣ್ಣು ಅರಳಿಸುತ್ತವೆ ’ಎನ್ನುತ್ತಾರೆ ಏಟ್ರೀ ವಿಜ್ಞಾನಿ ಸಿದ್ದಪ್ಪ ಶೆಟ್ಟಿ.
ದೂರದಿಂದ ದರ್ಶನ
‘ಈಗ ರಸ್ತೆ ಬದಿ ಜಲಪಾತದ ಸದ್ದು ಆಲಿಸಬಹುದು. ಕೆಲವೊಮ್ಮೆ ಹಾದಿ ಬದಿಯೇ ಕಿರು ಜಲಪಾತ ಜಿನುಗುತ್ತದೆ. ಪೂರ್ವ ಶ್ರೇಣಿಗಳ ಏರು ತಗ್ಗುಗಳ ಕಣಿವೆಯಲ್ಲಿ ನಿಧಾನಕ್ಕೆ ಹರಿಯುವ ಹೊಳೆಗಳಿವೆ. ನೈರುತ್ಯ ಮತ್ತು ದಕ್ಷಿಣಕ್ಕೆ ಜಲಾನಯನ ಪ್ರದೇಶ ವಿಸ್ತಾರವಾಗುತ್ತ ಹೋಗುತ್ತದೆ. ಕತ್ತರಿಬೆಟ್ಟ ಮತ್ತು ಹೊನ್ನಮೇಟಿ ಸುತ್ತಮುತ್ತ ದೂರದಿಂದಲೇ ದೊಡ್ಡ ಜಲಪಾತಗಳನ್ನು ವೀಕ್ಷಿಸಬಹುದು. ಬಿಆರ್ಟಿ ಜೀವನದಿ ಭಾರ್ಗವಿ ವನ್ಯ ಜೀವಿಗಳ ಪಾಲಿನ ಅಶ್ವಿನಿ ದೇವತೆ’ ಎಂದು ಶಿಖಾರಿ ಮಾದೇಗೌಡ ಅವರು ಸ್ಮರಿಸುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.