ಹೊಸಪೇಟೆ (ವಿಜಯನಗರ):ವಿಜಯನಗರ ಜಿಲ್ಲೆ ಛಾಯಾಗ್ರಹಣಕ್ಕೆ ಸ್ಫೂರ್ತಿಯ ನೆಲ ಎಂದರೆ ಅತಿಶಯೋಕ್ತಿ ಅಲ್ಲ.
ಭೌಗೋಳಿಕ, ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಹಿರಿಮೆ ಹೊಂದಿರುವ ಈ ನೆಲ ತನ್ನ ಒಡಲಲ್ಲಿ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಿಂದ ಸಹಜವಾಗಿಯೇ ದೇಶ–ವಿದೇಶದ ಛಾಯಾಗ್ರಾಹಕರನ್ನು ಸೂಜಿಗಲ್ಲಿನಂತೆ ತನ್ನತ್ತ ಆಕರ್ಷಿಸುತ್ತಿದೆ.
ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡರೂ ವಿಜಯನಗರ ಈಗಲೂ ವಿವಿಧ ಕಾರಣಗಳಿಂದ ಶ್ರೀಮಂತವಾಗಿದೆ. ಐತಿಹಾಸಿಕ, ಧಾರ್ಮಿಕ ಮತ್ತು ಭೌಗೋಳಿಕವಾಗಿ ಹೆಚ್ಚಿನ ಶ್ರೀಮಂತಿಕೆ ಹೊಂದಿದೆ.
ವಿಶ್ವ ಪ್ರಸಿದ್ಧ ಹಂಪಿ, ವಿಶಿಷ್ಟ ವಾಸ್ತುಶಿಲ್ಪ ಹೊಂದಿರುವ ಅಸಂಖ್ಯ ಸ್ಮಾರಕಗಳು, ಶಿಥಿಲಗೊಂಡ ದೇವಸ್ಥಾನ, ರಾಜ ಮನೆತನದವರ ಪಳೆಯುಳಿಕೆಗಳನ್ನು ಹೊಂದಿದೆ. ಇದು ವಾಸ್ತುಶಿಲ್ಪ, ಧಾರ್ಮಿಕ ದೃಷ್ಟಿಕೋನದಿಂದ ಜಗತ್ತಿನಲ್ಲೇ ವಿಶೇಷ ಮನ್ನಣೆ ಗಳಿಸಿದೆ. ಬಯಲು ವಸ್ತು ಸಂಗ್ರಹಾಲಯ ಎಂಬ ನಾಮದಿಂದಲೂ ಇದನ್ನು ಕರೆಯಲಾಗುತ್ತದೆ.
ಹಂಪಿ ಪರಿಸರದಲ್ಲಿಯೇ ತುಂಗಭದ್ರಾ ನದಿ ಹರಿಯುತ್ತದೆ. ಈ ಕಾರಣಕ್ಕಾಗಿ ಹಲವು ಜೀವಿಗಳ ಆವಾಸಸ್ಥಾನವೂ ಆಗಿದೆ. ನವಿಲು, ಕರಡಿ, ಚಿರತೆ, ಕಾಡುಹಂದಿ, ನೀರುನಾಯಿ, ಮಂಗ ಹೀಗೆ ಅಸಂಖ್ಯ ಜೀವ ಜಂತುಗಳ ಆವಾಸಸ್ಥಾನವಿದು. ಹೀಗೆ ಒಂದೇ ಸ್ಥಳ ಇಷ್ಟೊಂದು ವೈವಿಧ್ಯದಿಂದ ಕೂಡಿರುವ ಕಾರಣ ಅನೇಕರು ಇಲ್ಲಿಗೆ ಛಾಯಾಗ್ರಹಣಕ್ಕೆ ಬಂದು, ದಿನಗಳನ್ನು ಕಳೆಯುತ್ತಾರೆ. ಛಾಯಾಗ್ರಹಣಕ್ಕೆ ಜಿಲ್ಲೆಯ ಸ್ಫೂರ್ತಿಯ ಪ್ರಮುಖ ನೆಲೆ ಇದಾಗಿದೆ.
ಇನ್ನು, ತುಂಗಭದ್ರಾ ಜಲಾಶಯ ಕಡಿದಾದ ಬೆಟ್ಟಶ್ರೇಣಿಗಳ ನಡುವೆ ಇರುವುದರಿಂದ ಅದನ್ನು ಯಾರು ತಾನೇ ಕಣ್ತುಂಬಿಕೊಳ್ಳಲು ಬಯಸುವುದಿಲ್ಲ. ನೀರು ನಾಯಿ ಸಂರಕ್ಷಿತ ಪ್ರದೇಶ, ಕರಡಿಗಳ ಧಾಮ ದರೋಜಿ, ಅನ್ಯ ವನ್ಯಜೀವಿಗಳಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ನೀರು ನಾಯಿ ಸಂರಕ್ಷಿತ ಪ್ರದೇಶ, ಪ್ರಕೃತಿಯ ಮಧ್ಯೆ ನೆಲೆಸಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ, ದೇಶ–ವಿದೇಶದ ಹಕ್ಕಿಗಳ ನೆಲೆ ಅಂಕಸಮುದ್ರ, ಕೊಟ್ಟೂರಿನ ಗುರು ಬಸವೇಶ್ವರಸ್ವಾಮಿ, ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿ, ಗಾಣಗಟ್ಟೆ ಮಾಯಮ್ಮ ದೇವಿ, ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ, ಮೈಲಾರದ ಮೈಲಾರಲಿಂಗೇಶ್ವರ, ಕುರುವತ್ತಿಯ ಬಸವಣ್ಣ ದೇವಸ್ಥಾನ, ಸಿಂಗಟಾಲೂರು ಜಲಾಶಯ, ಗುಡೇಕೋಟೆ ಕರಡಿಧಾಮ ತನ್ನದೇ ಆದ ಪ್ರಾಮುಖ್ಯತೆ ಹೊಂದಿದ್ದು, ಇಲ್ಲಿಗೂ ಅಸಂಖ್ಯ ಛಾಯಾಗ್ರಹಕರು ಭೇಟಿ ಕೊಟ್ಟು, ಫೋಟೊಗ್ರಫಿ ಮೂಲಕ ಇವುಗಳ ಕೀರ್ತಿ ದೇಶ–ವಿದೇಶಗಳಿಗೆ ಹರಡುವಂತೆ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.