ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬೆ ಮನೆಯ ಅಂಗಳದಲ್ಲಿ...

Last Updated 19 ಅಕ್ಟೋಬರ್ 2015, 19:56 IST
ಅಕ್ಷರ ಗಾತ್ರ

ಮಹಿಷಾಸುರನ ಸಂಹಾರಕ್ಕಾಗಿ ಹೊರಟ ದುರ್ಗೆಗೆ ಶಕ್ತಿ ತುಂಬಲು ದೇವತೆಗಳೆಲ್ಲರೂ ತಮ್ಮ ತಮ್ಮ ಶಕ್ತಿಯನ್ನು ಅವಳಿಗೆ ನೀಡಿ ತಾವೆಲ್ಲರೂ ಬೊಂಬೆಗಳಾಗಿ ಕುಳಿತರೆಂಬ ಪ್ರತೀತಿಯಿದೆ. ಆದ್ದರಿಂದ ಬೊಂಬೆ ಇಡುವ ಆಚರಣೆ ದಸರೆಯ ಮುಖ್ಯ ಭಾಗವಾಗಿದ್ದು ಇಂದೂ ತನ್ನ ವೈಭವವನ್ನು ಅಷ್ಟೇ ವಿಶೇಷವಾಗಿ ಉಳಿಸಿಕೊಂಡು ಬೆಳೆದು ಬಂದಿದೆ. ದಸರಾ ಬೊಂಬೆಗಳು ದೇವತಾ ಸ್ವರೂಪಿಗಳೆಂದು ಅವುಗಳಲ್ಲಿ ಜೀವಂತಿಕೆ ಕಾಣುತ್ತಾರೆ ನಮ್ಮವರು.

ಶ್ರೀಮಂತರ ಮನೆಗಳಲ್ಲಿ ಆನೆಯ ದಂತ, ಬೆಳ್ಳಿ, ಬಂಗಾರದ ಬೊಂಬೆಗಳೂ ಸ್ಥಾನ ಪಡೆಯುತ್ತವೆ. ಮಾವು ಹುಣಸೇ ಮರದಿಂದಲೂ ತಯಾರಿಸಲಾಗುತ್ತದೆ. ಬೊಂಬೆಗಳು, ಪಶ್ಚಿಮ ಬಂಗಾಳ ತಂಜಾವೂರು ಮಾಯಾವರಂ ಪಣ್ ಕಾಚೀವರಂನ ಸಾಂಪ್ರದಾಯಿಕ ಮಣ್ಣಿನ ಕಲಾಕೃತಿಗಳು, ಚನ್ನಪಟ್ಟಣದ ಅರಗು-ತಿರುಗು ಆಟಿಕೆಗಳು, ಆಂಧ್ರದ ಕೊಂಡಪಲ್ಲಿ ಎಟ್ಟಿಕೊಪ್ಪ ಬೊಬ್ಬಿಲಿಯ ಸಂಗೀತ ವಾದ್ಯಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಬೊಂಬೆಗಳು ಈಗ ಎಲ್ಲರ ಮನೆಗಳಲ್ಲಿರುತ್ತವೆ.

ಇವೆಲ್ಲವುಗಳಿಗಿಂತ ಭಿನ್ನವಾಗಿ ಸೃಜನಶೀಲ ಮಹಿಳೆಯರು ರಾಮಾಯಣ ಮಹಾಭಾರತದ ಯಾವುದೇ ಪೌರಾಣಿಕ ಪ್ರಸಂಗ, ಧಾರ್ಮಿಕ ಪ್ರಸಂಗಗಳನ್ನೂ ಸೃಷ್ಟಿಸುತ್ತಾರೆ. ಅಂತಹ ಮಹಿಳೆಯರಲ್ಲೊಬ್ಬರು, ಹರಿಹರದ ವಿಜಯಲಕ್ಷ್ಮಿ ರಾಮಚಂದ್ರ.

ಮೂರು ತಲೆಮಾರುಗಳ ಬೊಂಬೆಗಳು ಇವರಲ್ಲಿರುವುದು ವಿಶೇಷ. ಹಲವಾರು ಮೆಟ್ಟಿಲುಗಳನ್ನು ನಿರ್ಮಿಸಿ ಅದ್ಭುತವಾದ ಸಾಂಪ್ರದಾಯಿಕವಾದ ಬೊಂಬೆಮನೆ ರಚಿಸುವಲ್ಲಿ ವಿಜಯಲಕ್ಷ್ಮಿ ನಿಸ್ಸೀಮರು. ದಸರೆಯ ಹತ್ತು ದಿನವೂ ಇವರ ಮನೆಗೆ ನೂರಾರು ಜನರ ಓಡಾಟ. ಬಂದವರೆಲ್ಲಾ ಬೊಂಬೆಯ ಸುಂದರ ದೃಶ್ಯಕಾವ್ಯ ನೋಡಿ ಸಂತಸ ಪಡುವುದು ಒಂದೆಡೆಯಾದರೆ ಬರುವವರೆಲ್ಲರಿಗೂ ಇವರು ಕಿರುಕಾಣಿಕೆ ನೀಡುವುದು ಮತ್ತೊಂದು ವಿಶೇಷ. ಮಕ್ಕಳಿಗಂತೂ ಸಿಹಿ  ಸವಿಯುವ ಅವಕಾಶವೂ ಇದೆ.

ಬೊಂಬೆಗಳ ಕಲಾತ್ಮಕ ಪ್ರದರ್ಶನದಲ್ಲಿ ಅತ್ಯಾಸಕ್ತಿಯುಳ್ಳ ವಿಜಯಲಕ್ಷ್ಮಿ ದಂಪತಿ ಎಲ್ಲಿ ಹೋದರೂ ಬೊಂಬೆಗಳನ್ನು ಮನೆಗೆ ತರುತ್ತಾರೆ. ವಿದೇಶದಲ್ಲಿರುವ ಮಕ್ಕಳೂ ತಾಯಿಯ ಈ ಹವ್ಯಾಸಕ್ಕೆ ನೀರೆರೆಯುತ್ತಾರೆ. ಹೀಗಾಗಿ ಇವರ ಸಂಗ್ರಹ ವರ್ಷ ವರ್ಷವೂ ಹೆಚ್ಚಾಗುತ್ತಲೇ ಸಾಗಿದೆ.

ಹಬ್ಬದ ಆರಂಭಕ್ಕೆ 15 ದಿನಕ್ಕೆ ಮುಂಚಿನಿಂದಲೇ ಸಂಭ್ರಮ ಪ್ರಾರಂಭವಾಗುತ್ತದೆ. ಹಿತ್ತಾಳೆ ಕಂಚು ಪ್ರತಿಮೆಗಳು ಶುಭ್ರಗೊಂಡು ಥಳಥಳ ಹೊಳೆಯುತ್ತವೆ. ನೂರಾರು ಜೊತೆ ಪಟ್ಟದ ಬೊಂಬೆಗಳು ಹಾಗೂ ಇತರ ಬೊಂಬೆಗಳು ದೂಳು ನಿವಾರಿಸಿಕೊಂಡು ನವ ವಸ್ತ್ರಾಭರಣ ಧರಿಸಿ ಹೊಳೆಯುತ್ತವೆ. ಲಕ್ಷ್ಮಿ, ಸರಸ್ವತಿ, ಗೌರಿ, ಕೃಷ್ಣ, ವಿಷ್ಣು ಹಾಗೂ ಇತರೆ ದೇವಾನುದೇವತೆಗಳ ಮಣ್ಣಿನ ಮೂರ್ತಿಗಳು ಹಾಗೂ ಹಲವಾರು ಬೊಂಬೆಗಳನ್ನು ಕಾಪಿಟ್ಟು ಸಜ್ಜುಗೊಳಿಸುವ ಕಲೆ ಇವರಿಗೆ ಒಲಿದು ಬಂದಿದೆ.

ರಾಮಾಯಣ, ಮಹಾಭಾರತದ ಪಾತ್ರಗಳು, ಋಷಿ ಮುನಿಗಳು, ಉಯ್ಯಾಲೆ ಗೌರಿ, ಬೆತ್ತದ ಗಿಲಕಿ, ಬಾಗಿಲಲ್ಲಿ ಎರಡೂ ಕಡೆ ಸ್ವಾಗತಿಸುವ ಒಂದಾಳಿನ ಎತ್ತರದ ಬೊಂಬೆಗಳು ಮನಸೆಳೆಯುತ್ತವೆ. ಸಾಲಾಗಿ ಸಾಗಿ ಬರುವಂತಿರುವ ಆನೆಗಳು ಮೈಸೂರಿನ ದಸರಾ ನೆನಪಿಸುತ್ತವೆ. ಹೊರಬಾಗಿಲಿನಿಂದಲೂ ಎರಡೂ ಕಡೆಯೂ ಬಗೆಬಗೆಯ ಬಣ್ಣದ ಹೂಗಳು ಮುಗುಳ್ನಗೆ ಬೀರುತ್ತಾ ಎದುರುಗೊಳ್ಳುತ್ತವೆ. ಹಳೆಯ ಕಾಲದ ಹಿತ್ತಾಳೆ, ತಾಮ್ರದ ಕಾಫಿ ಹಾಗೂ ಟೀ ಸೆಟ್‌ಗಳು, ಹತ್ತು ಹಲವು ವಿದೇಶಿ ಬೊಂಬೆಗಳು ಇವರ ಸಂಗ್ರಹದಲ್ಲಿವೆ.

ವಿಜಯಲಕ್ಷ್ಮಿ ಅವರಲ್ಲಿನ ಸುಪ್ತವಾದ ಕಲೆ ಅವರ ಚಿಂತನಾ ಲಹರಿ, ವಿಷಯ ಪ್ರಸ್ತುತತೆಗೆ ಹೊಸ ರೂಪ ಕೊಡುತ್ತಾ ಸಾಗುತ್ತಾ ಹೋಗುತ್ತದೆ. ಇವರ ಸಂಗ್ರಹದಲ್ಲಿ ಕಸದಲ್ಲಿ ರಸವಾಗಿಸಿರುವ ಆಕರ್ಷಕ ಬೊಂಬೆಗಳು, ಆಕೃತಿಗಳನ್ನೂ ಕಾಣಬಹುದು. ಇವರ ಈ ಹವ್ಯಾಸ, ಆಸಕ್ತಿಯಲ್ಲಿ ಕಲಾವಿದರಿಗೆ ಪ್ರೋತ್ಸಾಹ, ಪರಿಸರ ಜಾಗೃತಿ, ಸಂಸ್ಕೃತಿಯ ಅನಾವರಣ, ಸಾಮಾಜಿಕ ಬಾಂಧವ್ಯದ ಬೆಸುಗೆ ಎಲ್ಲವೂ ಮೇಳೈಸಿದೆ.

ಧಾರ್ಮಿಕವಾಗಿ ಹೇಳುವುದಾದರೆ ಪಾಡ್ಯದ ದಿನ ಇಲ್ಲವೇ ಸರಸ್ವತಿ ಪೂಜೆಯಂದು [ಮೂಲಾನಕ್ಷತ್ರ] ಕಲಶ ಸ್ಥಾಪನೆಯೊಂದಿಗೆ ಬೊಂಬೆ ಕೂರಿಸಿ, ದಶಮಿಯಂದು ಜಂಬೂಸವಾರಿಗೆ ಚಾಲನೆ ದೊರೆತು, ಬನ್ನಿ ಮಂಟಪ ತಲುಪುವ ಹೊತ್ತಿಗೆ ರಾಜ-ರಾಣಿ ಬೊಂಬೆಗಳನ್ನು ಮಲಗಿಸಲಾಗುತ್ತದೆ, ಅಲ್ಲಿಗೆ ದಸರೆ ಬೊಂಬೆ ಪ್ರದರ್ಶನಕ್ಕೆ ತೆರೆ ಬೀಳುತ್ತದೆ. ಮಾರನೇ ದಿನ ಕಲಶ ವಿಸರ್ಜನೆ.

ಆದರೆ ಇದರಲ್ಲಿ ಮನೋವಿಜ್ಞಾನವೂ ಅಡಗಿದೆ ಎನ್ನುತ್ತಾರೆ  ವಿದ್ವಾಂಸರು. ವ್ಯಕ್ತಿತ್ವ ವಿಕಸನದ ಮೊದಲ ಮೆಟ್ಟಿಲೇ ಬೊಂಬೆಗಳು. ಸಂತ ಮೀರಾಳು ಕೃಷ್ಣನ ವಿಗ್ರಹವೇ ತನ್ನ ಜೀವಾಳವೆಂಬ ಭಾವನೆಯಲ್ಲೇ ಬದುಕಿದಳು.

ಅಳುವ ಮಗುವಿಗೆ ಬೊಂಬೆ ಭಾವನೆ ಹಂಚಿಕೊಳ್ಳುವ ಆಸರೆ, ಇದರೊಂದಿಗೆ ಮಗುವಿನ ಬುದ್ಧಿವಂತಿಕೆ ಬೆಳೆಯುತ್ತಾ ಹೋಗುತ್ತದೆ. ಮಗುವಿನ ಅಂಗಗಳೆಲ್ಲವೂ ಕ್ರಿಯಾಶೀಲವಾಗುತ್ತವೆ. ದಸರಾ ಬೊಂಬೆಯ ಸಡಗರದ ಹಿಂದೆ ಇಷ್ಟೆಲ್ಲಾ ವೈಜ್ಞಾನಿಕತೆ ಇರುವುದು ಬೊಂಬೆಗಳನ್ನು ವೀಕ್ಷಿಸಿದಾಗ ಅರಿವಾಗುತ್ತದೆ.
***
ಕಣ್ಮರೆಯಾದ ಅಪರೂಪದ ಕಲಾ ಕುಸುರಿ
ದಸರಾ ಬಂತೆಂದರೆ ಸಾಕು. ಡಬ್ಬ, ಪೆಟ್ಟಿಗೆಗಳಲ್ಲಿ ಸಂಗ್ರಹವಾಗಿದ್ದ ಬೊಂಬೆಗಳು ದೂಳು ಕೊಡವಿಕೊಂಡು ಹೊರಗೆ ಬರುತ್ತವೆ. ಸುಂದರವಾಗಿ ಜೋಡಿಸಿದಾಗ ಅಲ್ಲಿ ಬೇರೆಯದೇ ಲೋಕ ಸೃಷ್ಟಿಯಾದಂತೆ ಕಾಣುತ್ತದೆ. ಸುಮಾರು 30 ವರ್ಷಗಳ ಹಿಂದೆ ಹೀಗೆ ಬೊಂಬೆಗಳನ್ನು ಸುಂದರವಾಗಿ ಜೋಡಿಸುವ ಸ್ಪರ್ಧೆ ಕೂಡ ನಡೆಯುತ್ತಿತ್ತು. ಇಂತಹ ಒಂದು ಸುಂದರ ದೃಶ್ಯ ಗ್ರಾಮೀಣ ಪ್ರದೇಶದ ಮನೆಮನೆಗಳಲ್ಲಿ ಕಂಡು ಬರುತ್ತಿತ್ತು. 

ಆದರೆ ಈಗ ಕ್ರಿಸ್ಟಲ್ ಮಣಿ ಮತ್ತು ಕುಂದನ್‌ಗಳ ಹಾವಳಿಯಿಂದಾಗಿ ಈ ಕಲೆ ಮಾಯವಾಗಿದೆ. ಮುತ್ತುಗಳಿಂದ (ಗುಂಡು) ಮಾಡಿದ ಅನೇಕ ತರಹದ ಬೊಂಬೆಗಳು, ಪ್ರಾಣಿ ಪಕ್ಷಿಗಳು, ಬಾಗಿಲ ಪರದೆಗಳು, ಕಸೂತಿ ಹೀಗೆ ನಾನಾ ತರಹದಲ್ಲಿ ಕಂಡುಬರುತ್ತಿದ್ದ ಕಲೆಗಳು ಕೂಡ ಈಗ ಮಾಯವಾಗಿದೆ. ಮಹಿಳೆಯರ ಆಸಕ್ತಿ ಕುಂದಿರುವುದೋ ಅಥವಾ ಎಲ್ಲದರಲ್ಲಿಯೂ ಕೃತ್ರಿಮತೆ ಬಂದಿರುವುದೋ ಗೊತ್ತಿಲ್ಲ, ಒಟ್ಟಿನಲ್ಲಿ ಮೂರು ನಾಲ್ಕು ದಶಕಗಳ ಹಿಂದೆ ಇದ್ದ ಅನೇಕ ಕಲಾಪ್ರಕಾರಗಳು ಈಗ ನಶಿಸುತ್ತಿವೆ.

ಹೀಗೆ ಮಾಯವಾದ ಕಲೆಗಳಲ್ಲಿ ಇದೊಂದು ಅಪರೂಪದ ಕಲಾ ಕುಸುರಿ ಮುತ್ತಿನ ಕಲೆ. ಈ ಮುತ್ತಿನ ಕಲೆಯ ಸೌಂದರ್ಯವನ್ನು ನೋಡಬೇಕೆಂದರೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿಯ ಹೊಸಪೇಟೆ ನಿವಾಸಿ ವಿಜಯಲಕ್ಷ್ಮಿ ಕೆ.ಬಿ. ಎಂಬುವವರ ಮನೆಗೆ ಬರಬೇಕು.  ಅಚ್ಚರಿ ಮೂಡಿಸುವಂಥ ಹಲವು ಬೊಂಬೆಗಳನ್ನು ಕಾಣಬಹುದು.

ಕುಸುರಿ ಮಾಡುವ ತಾಳ್ಮೆ, ಸಹನೆ, ಕಲ್ಪನೆ ಎಲ್ಲವೂ ಈ ಕಲೆಗೆ ಬೇಕಾಗುತ್ತದೆ. ಇವರ ಸಂಗ್ರಹದಲ್ಲಿ ಮುತ್ತುಗಳಿಂದ ತಯಾರಾದ ತೋರಣ, ದೇವಸ್ಥಾನ, ತುಳಸಿ ಕಟ್ಟೆ, ನಾಗದೇವತೆ, ದೀಪಸ್ತಂಭ, ಕುದುರೆ, ಮೊಲ, ಆನೆ, ಜಿಂಕೆ, ಕೊಕ್ಕರೆ, ಗಿಳಿ, ಬಾತುಕೋಳಿ, ಸೋಫಾ, ಕುರ್ಚಿ, ಟೀಪಾಯಿ... ಹೀಗೆ ಹಲವು ಕಲಾಕೃತಿಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಸುಂದರ. ಇವುಗಳನ್ನು ತಯಾರಿಸಿ 40 ವರ್ಷ ಕಳೆದರೂ ಮುತ್ತುಗಳ ಬಣ್ಣ ಮಾಸಿಲ್ಲ! ದಾರಗಳು, ತಂಗೂಸು ತುಂಡಾಗಿಲ್ಲ, ಒಳಗೆ ತುಂಬಿರುವ ಹತ್ತಿ ಕೆಟ್ಟಿಲ್ಲ, ರಟ್ಟುಗಳು  ಹಾಳಾಗಿಲ್ಲ. ಆದರೆ ಕಲೆಯನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಿಲ್ಲ  ಎಂಬ ಕೊರಗು ಇವರದ್ದು. 
- ವಿನಾಯಕ ಭೀಮಪ್ಪನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT