ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು–ಕೊರತೆ

Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

 ತಂಗುದಾಣ ನಿರ್ಮಿಸಿ
ಬಳ್ಳಾರಿ ರಸ್ತೆಯ ಬ್ಯಾಟರಾಯನ ಪುರದಲ್ಲಿ ಎರಡೂ ಬದಿಗಳಲ್ಲಿ ಬಿಎಂಟಿಸಿ ಇಂದಲಾಗಲಿ, ಬಿಬಿಎಂಪಿ ಕಡೆಯಿಂದಾಗಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿಲ್ಲ. ಇದರಿಂದ ಬಸ್‌ಗಳು ನಿರ್ದಿಷ್ಟ ಕಡೆ ನಿಲ್ಲದೆ  ಬಸ್ಸು ಹತ್ತಲು ಕಾಯುವ ಮಹಿಳೆಯರು, ವೃದ್ಧರು ಎಲ್ಲರಿಗೂ ಬಹಳ ಕಷ್ಟವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಈ ಪ್ರದೇಶದಲ್ಲಿನ ಶಾಸಕರು, ಮಂತ್ರಿಗಳೂ ಗಮನಹರಿಸದಿರುವುದು ಆಶ್ಚರ್ಯ ತಂದಿದೆ. ಇನ್ನಾದರೂ ಸಂಬಂಧಪಟ್ಟವರು ಎರಡೂ ಬದಿಯಲ್ಲಿ ತಂಗುದಾಣ ನಿರ್ಮಿಸಲಿ.
ಎಂ. ದೇವರಾಜು, ಬ್ಯಾಟರಾಯನಪುರ

ಗೋಡೆಗೆ ‘ಕೈಹಿಡಿ’ ಅಳವಡಿಸಿ
ಬಸ್‌ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರು ಬೆಂಗಳೂರು ಸಿಟಿ ನಿಲ್ದಾಣಕ್ಕೆ ಹೋಗಬೇಕಾದರೆ ಅಂಡರ್‌ಪಾಸ್‌ ಮುಖಾಂತರವೇ ಹೋಗಬೇಕು. ಆದರೆ ಗೋಡೆಯ ಇಕ್ಕೆಲಗಳಲ್ಲಿ ಇಳಿಯಲು, ಏರಲು ಕೈಹಿಡಿ ಅಳವಡಿಸಿಲ್ಲ. ಇದರಿಂದ ಸಾವಿರಾರು ಹಿರಿಯ ನಾಗರಿಕರಿಗೆ, ಹೆಣ್ಣು ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗೆ ತೊಂದರೆ ಆಗಿದೆ. ಅತಂತ್ರವಾಗಿಯೇ ಏರಬೇಕು ಮತ್ತು ಇಳಿಯಬೇಕು. ಅಂಡರ್‌ಗ್ರೌಂಡ್‌ನ ಎರಡೂ ಬದಿ ಗೋಡೆಗೆ ಕೈಹಿಡಿ ಅಳವಡಿಸಿದರೆ ಅಶಕ್ತ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತದೆ. ನಿಲ್ದಾಣಕ್ಕೆ ಬರುವವರಿಗೂ, ಸ್ಟೇಷನ್‌ನಿಂದ ಸಿಟಿ ಬಸ್‌ ನಿಲ್ದಾಣಕ್ಕೆ ಹೋಗಲು ಇರುವುದು ಇದೊಂದೇ ಮಾರ್ಗ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲು ವಿನಂತಿ.
ಎಸ್.ಆರ್. ದೇಸಾಯಿ, ರಾಯಚೂರು

ಶೌಚಾಲಯದ ಬಾಗಿಲು ತೆರೆಯಿರಿ
ಸುಬ್ಬಯ್ಯ ವೃತ್ತ ಬಿ.ಬಿ.ಎಂ.ಪಿ. ಪ್ರಧಾನ ಕಚೇರಿಗೆ ಬಹಳ ಹತ್ತಿರದಲ್ಲಿರುವ ವೃತ್ತ. ಸರಕಾರಿ ಫಾರ್ಮಸಿ ಕಾಲೇಜು ಇದೆ. ಶಾಲೆಗಳು ಇವೆ. ಸಾವಿರಾರು ಜನರು ಓಡಾಡುತ್ತಾರೆ. ಸಮಸ್ಯೆ ಏನೆಂದರೆ ಇರುವ ಒಂದು ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಇದರ ಪರಿಣಾಮವಾಗಿ ಜನ ಶೌಚಾಲಯದ ಅಕ್ಕಪಕ್ಕಗಳಲ್ಲಿ ಮೂತ್ರ ಮಾಡುತ್ತಾರೆ. ಅದು ರಸ್ತೆಗೆ ಹರಿದು ಕೆಟ್ಟ ವಾಸನೆ ಹರಿಡಿದೆ. ಇದಲ್ಲದೆ ವೃತ್ತದ ಸುತ್ತಮುತ್ತಲು ವಿಪರೀತ ಕಸ. ಜನ ಓಡಾಡಲು ಹರಸಾಹಸ ಪಡಬೇಕಾಗಿದೆ. ನೋ ಪಾರ್ಕಿಂಗ್ ಇದ್ದರೂ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಪಾದಚಾರಿ ಮಾರ್ಗವನ್ನು ಶುಚಿ ಮಾಡಿ, ಸಾರ್ವಜನಿಕ ಮೂತ್ರಾಲಯವನ್ನು ಜನ ಉಪಯೋಗಿಸಲು ವ್ಯವಸ್ಥೆ ಮಾಡಬೇಕಾಗಿ ವಿನಂತಿ.
ಜಿ.ಎಸ್. ಪ್ರಭಾಕರ್, ಲಾಲ್‌ಬಾಗ್ ರಸ್ತೆ.

ಸೊಳ್ಳೆ ನಿಯಂತ್ರಿಸಿ
ಕರ್ನಾಟಕದಲ್ಲಿ ಡೆಂಗಿ ಕಾಯಿಲೆಯಲ್ಲಿ ಬೆಂಗಳೂರಿನ ಪಾಲು ಶೇ 54ರಷ್ಟಿದೆ ಎಂದಿರುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಅಂಕಿ ಅಂಶ ಬಿ.ಬಿ.ಎಂ.ಪಿ.ಯನ್ನು ಎಚ್ಚರಗೊಳಿಸಲಿ.
ಸೊಳ್ಳೆಗಳ ನಿಯಂತ್ರಣಕ್ಕಾಗಿ ₹18 ಕೋಟಿ ಬಳಸಲಾಗಿದೆ ಎಂದು ಬಿ.ಬಿ.ಎಂ.ಪಿ. ಹೇಳಿದೆ. ಅದು ಕೇವಲ ಕಾಗದದ ಮೇಲಷ್ಟೆ ಎಂಬುದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ನೀಡಿರುವ ವರದಿಯಿಂದ ಗೊತ್ತಾಗಿದೆ.
ಬೇಸಿಗೆ ಸಮೀಪಿಸುತ್ತಿದ್ದು ಬೆಂಗಳೂರಿಗರಲ್ಲಿ ಮತ್ತೆ ಚಿಕನ್‌ಗುನ್ಯಾ ಡೆಂಗಿ ಜ್ವರಗಳ ಭೀತಿ ಕಾಡುತ್ತಿದೆ. ಬಿಬಿಎಂಪಿಯು ಕೇವಲ ಕಣ್ಣೊರೆಸುವ ತಂತ್ರ ಮಾಡದೆ ಸೊಳ್ಳೆ ನಿಯಂತ್ರಿಸಲು ಪರಿಣಾಮಕಾರಿ ತಂತ್ರಗಳನ್ನು ಬಳಸಬೇಕೆಂದು ಮನವಿ.
ಕಾಡನೂರ ರಾಮಶೇಷ, ಹುಲಿಮಂಗಲ

ಬೀದಿ ದೀಪ ಸರಿಪಡಿಸಿ
ಸಿ.ವಿ. ರಸ್ತೆ ಮೊದಲನೇ ಕ್ರಾಸ್ (ಮೈಸೂರು ಪೇಂಟ್ಸ್‌ ಹಿಂಭಾಗ) ವಿದ್ಯುತ್‌ ಕಂಬಗಳ ಬಳಿ ಸುರಿದ ಕಸಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಬೀದಿ ದೀಪಗಳು ಹಾಳಾಗಿವೆ. ಕೂಡಲೆ ಬಿಬಿಎಂಪಿ ಅಧಿಕಾರಿಗಳು ಹಾಳಾಗಿರುವ ಬೀದಿ ದೀಪಗಳನ್ನು ಬದಲಾಯಿಸಿ ಈ ರಸ್ತೆಯಲ್ಲಿ ಓಡಾಡುವವರಿಗೆ ಆಗುತ್ತಿರುವ ತೊಂದರೆಸರಿಪಡಿಸಬೇಕು  ಹಾಗೂ ಸಿ.ವಿ.ರಸ್ತೆ ತಿರುವಿನಲ್ಲಿ ಸುರಿಯಲಾಗುತ್ತಿರುವ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ಮನವಿ.
ಸಿ.ವಿ.ರಸ್ತೆ ನಿವಾಸಿಗಳು

ಡಾಂಬರು ಭಾಗ್ಯ ಕರುಣಿಸಿ
ನಾಗದೇವನಹಳ್ಳಿ ಮುಖ್ಯರಸ್ತೆಗೆ ಡಾಂಬರು ಸಾಧಾರಣ ಮಟ್ಟದಲ್ಲಿ ಇದೆ. ಆದರೆ ಅಡ್ಡರಸ್ತೆಗಳು ಡಾಂಬರು ಭಾಗ್ಯ ಕಂಡಿಲ್ಲ. 8, 9, 10ನೇ ಅಡ್ಡರಸ್ತೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ ರಸ್ತೆಗೆ ಆದಷ್ಟೂ ಬೇಗ ಡಾಂಬರು ಭಾಗ್ಯ ಕರುಣಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.
ಬೆಳ್ಳಾವೆ ರಮೇಶ್‌

ಧೂಮಪಾನಿಗಳನ್ನು ನಿಯಂತ್ರಿಸಿ
ಬಿಬಿಎಂಪಿ ವಾರ್ಡ್‌ ನ. 2 ಪುಟ್ಟೇನಹಳ್ಳಿ ಯಲಹಂಕ ಸಮೀಪದಲ್ಲಿರುವ ಈ ಜಾಗದಲ್ಲಿ ಅಂದರೇ ಕಾಫಿ/ಟಿ ಕೇಂದ್ರಗಳಲ್ಲಿ ಸಿಗರೇಟ್‌ ಸೇದುವವರು ಜಾಸ್ತಿಯಾಗಿದ್ದಾರೆ. ಇದರಿಂದ ಕಿರಕಿರಿಯುಂಟಾಗುತ್ತಿದೆ. (ಚಿಮಣಿ ರೀತಿ ಹೊಗೆ ಬಿಡುವುದು) ಇದರಿಂದ ಪರಿಸರ ತುಂಬಾ ಹದಗೆಡುತ್ತಿದೆ. ಪೋಲಿಸ್‌ನವರು ಇತ್ತ ಸುಳಿಯುತ್ತಿಲ್ಲ. ಇಂತಹ ಕಡೆ ಬೋರ್ಡ್‌ ಹಾಕುವುದು ಸೂಕ್ತ.
ನೊಂದ ನಾಗರೀಕರು, ಬೆಂಗಳೂರು

ಸಿಗ್ನಲ್‌ ದೀಪ ಸರಿಪಡಿಸಿ
ನಗರದ ದಕ್ಷಿಣ ಭಾಗದಲ್ಲಿನ ಸಂಚಾರಿ ಸಿಗ್ನಲ್‌ಗಳ ಬಲ್ಬ್‌ಗಳು ಹಾಳಾಗಿವೆ. ಈ ವಿಷಯದ ಬಗ್ಗೆ ಅನೇಕ ಬಾರಿ ಪೊಲೀಸರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಪೋಲಿಸ್‌ ಇಲಾಖೆಯವರು ನಗರದ ದಕ್ಷಿಣ ಭಾಗದಲ್ಲಿನ ಸಿಗ್ನಲ್‌ ದೀಪಗಳನ್ನು ದುರಸ್ತಿಗೊಳಿಸಬೇಕೆಂದು ವಿನಂತಿಸುತ್ತೇನೆ.
ಎಸ್‌. ವಿಜಯಕುಮಾರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT