ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಗಮನಿಸದ, ಭಾರತದ ಡಿಜಿಟಲ್ ಪರಿವರ್ತನೆ

Last Updated 2 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದ ಮಾಧ್ಯಮವೊಂದಕ್ಕೆ ಈಚೆಗೆ ನೀಡಿದ ಸಂದರ್ಶನದಲ್ಲಿ ನಾನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ‘ಮಿದುಳು ತಿನ್ನುವ ಕಾಯಿಲೆ’ ಎಂದು ಬಣ್ಣಿಸಿದೆ. ನಾನು ಹಾಗೆ ಬಣ್ಣಿಸಿದ್ದಕ್ಕೆ ಕಾರಣವಿದೆ. ಟ್ರಂಪ್ ಅವರ ಅನುಚಿತ ವರ್ತನೆಗಳು, ಅವರು ಒಂದೇಸಮನೆ, ರೇಗಿಸುವಂತೆ ಮಾಡುವ ಟ್ವೀಟ್‌ಗಳು ಹಾಗೂ ಅವರ ಕ್ರಿಯೆಗಳು, ಸಮಕಾಲೀನ ವಿಚಾರಗಳ ಬಗ್ಗೆ ಅಭಿಪ್ರಾಯ ದಾಖಲಿಸುವವರ ಎದುರು ಎರಡು ಆಯ್ಕೆಗಳನ್ನು ಇಡುತ್ತವೆ: ಅವರ ಎಲ್ಲ ಕ್ರಿಯೆಗಳನ್ನು ನಿರ್ಲಕ್ಷಿಸುತ್ತ, ಟ್ರಂಪ್‌ ಅವರ ಅತಿರೇಕಗಳೆಲ್ಲವೂ ಸಹಜ ಎಂಬಂತಹ ಸ್ಥಿತಿ ತಲುಪಿಬಿಡುವುದು. ಅಥವಾ, ಟ್ರಂಪ್‌ ಅವರ ಬಗ್ಗೆಯೇ ಮತ್ತೆ ಮತ್ತೆ ಬರೆಯುತ್ತ, ಈಗ ಜಗತ್ತನ್ನು ಪರಿವರ್ತನೆಗೆ ಒಳಪಡಿಸುತ್ತಿರುವ ಬೆಳವಣಿಗೆಗಳ ಬಗ್ಗೆ ಅರಿಯಲು ಹಾಗೂ ಅವುಗಳ ಬಗ್ಗೆ ಬರೆಯಲು ಸಮಯವೇ ಇಲ್ಲದಂತೆ ಮಾಡಿಕೊಳ್ಳುವುದು. ವಿಶ್ವವನ್ನು ಬದಲಿಸುತ್ತಿರುವ ಕೆಲವು ಸಂಗತಿಗಳು ಒಂದು ದಿನ ನಿಮ್ಮ ಓದುಗರನ್ನು ಆಶ್ಚರ್ಯಗೊಳಿಸುತ್ತವೆ, ‘ಇವೆಲ್ಲ ನನಗೆ ಹೇಗೆ ಗೊತ್ತಾಗಲಿಲ್ಲ’ ಎಂದು ಓದುಗ ಕೇಳುವಂತೆ ಮಾಡುತ್ತವೆ.

ಟ್ರಂ‍ಪ್ ಅವರು ನನ್ನ ಮಿದುಳು ತಿನ್ನದಂತೆ ತಪ್ಪಿಸಿಕೊಳ್ಳಲು ನಾನು ಆಗಾಗ ಸಾಧ್ಯವಾದಷ್ಟು ದೂರ ಹೋಗಿಬಿಡುತ್ತೇನೆ. ಈ ಬಾರಿ ನಾನು ಭಾರತಕ್ಕೆ ಹೋಗಿದ್ದೆ. ನಾನು ತಿಳಿದಿರದಿದ್ದ ಹತ್ತು ಹಲವು ಸಂಗತಿಗಳನ್ನು ಅಲ್ಲಿ ಕಲಿತುಕೊಂಡೆ. ತನ್ನ ಇಡೀ ಅರ್ಥ ವ್ಯವಸ್ಥೆಯನ್ನು ವೇಗವಾಗಿ ಡಿಜಿಟಲೀಕರಣಗೊಳಿಸಿ, ವಿದ್ಯುತ್‌ ಗ್ರಿಡ್‌ ವ್ಯವಸ್ಥೆಗೂ ಡಿಜಿಟಲ್ ಸ್ಪರ್ಶ ನೀಡಿ ಭಾರತವು ಬಡತನದ ಹಿಡಿತದಿಂದ ಹೊರಬರಲು ಹಾಗೂ ಚೀನಾಕ್ಕೆ ಸರಿಸಮನಾಗಿ ನಿಲ್ಲಲು ಯತ್ನಿಸುತ್ತಿರುವುದನ್ನು ಕಂಡೆ.

ನಿಜ, ನಮ್ಮ ಅಧ್ಯಕ್ಷ ಗಾಲ್ಫ್‌ ಆಡುವುದರಲ್ಲಿ ಮತ್ತು ಲವಾರ್‌ ಬಾಲ್‌ ಅವರ ಬಗ್ಗೆ ಟ್ವೀಟ್‌ ಮಾಡುವುದರಲ್ಲಿ ನಿರತರಾಗಿರುವ ಸಂದರ್ಭದಲ್ಲೇ, ಚೀನಾವು ನಗದು ರಹಿತ ಸಮಾಜವೊಂದನ್ನು ನಿರ್ಮಿಸುತ್ತಿದೆ. ಅಲ್ಲಿ ಜನ ಹಲವಾರು ಉತ್ಪನ್ನ, ಸೇವೆಗಳಿಗೆ ಮೊಬೈಲ್‌ ಮೂಲಕವೇ ಹಣ ಪಾವತಿ ಮಾಡಬಹುದು– ಭಿಕ್ಷುಕರಿಗೂ ಮೊಬೈಲ್‌ ಮೂಲಕವೇ ಹಣ ಕೊಡಬಹುದು. ಉತ್ಪನ್ನಗಳನ್ನು ಮಾರುವ ಯಂತ್ರದ ಎದುರು ನಿಂತು, ಆ ಯಂತ್ರ ನಮ್ಮ ಮುಖವನ್ನು ಗುರುತಿಸುತ್ತಿದ್ದಂತೆಯೇ ಹಣ ಪಾವತಿ
ಯಾಗುವಂತಹ ಅವಕಾಶವೂ ಅಲ್ಲಿದೆ. ಇವೆಲ್ಲವನ್ನೂ ಸಾಧ್ಯವಾಗಿಸುವ ಯತ್ನ ಈಗ ಭಾರತದಲ್ಲಿ ಕೂಡ ನಡೆದಿದೆ.

ಇವೆಲ್ಲವೂ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿರುವ ಬದಲಾವಣೆಗಳು. ವಿಶ್ವದಲ್ಲಿ ಹಿಂದೆ ತೈಲಕ್ಕೆ ಇದ್ದ ಮೌಲ್ಯ ಈಗ ಮಾಹಿತಿಗೆ (ಡೇಟಾ) ಇದೆ. ಈ ಹೊತ್ತಿನಲ್ಲಿ ಭಾರತ ಮತ್ತು ಚೀನಾ ದೇಶಗಳು ಡಿಜಿಟಲ್ ಸ್ವರೂಪದ ಬೃಹತ್ ಪ್ರಮಾಣದ ಮಾಹಿತಿ ಕೋಶಗಳನ್ನು ಸೃಷ್ಟಿಸುತ್ತಿವೆ. ಆ ದೇಶಗಳಲ್ಲಿನ ತಂತ್ರಜ್ಞರು ಹೊಸ ಸ್ವರೂಪದ, ಕಡಿಮೆ ಬೆಲೆಯ ಶಿಕ್ಷಣ, ವೈದ್ಯಕೀಯ ವಿಮೆ, ಮನರಂಜನೆ, ಬ್ಯಾಂಕಿಂಗ್ ಮತ್ತು ಹಣಕಾಸು ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಲು ಈ ಮಾಹಿತಿ ಕೋಶಗಳನ್ನು ಬಳಸುತ್ತಿದ್ದಾರೆ.

ಭಾರತದಲ್ಲಿ ನಡೆದಿರುವ ಒಂದು ಬೃಹತ್ ಬದಲಾವಣೆ ಕಂಡು ನಾನು ದಂಗಾಗಿಬಿಟ್ಟೆ. ನನ್ನ ಸ್ನೇಹಿತ, ತಂತ್ರಜ್ಞಾನ ಉದ್ಯಮಿ ನಂದನ್ ನಿಲೇಕಣಿ ಅವರು 2009ರಲ್ಲಿ ಪರಿಣತರ ತಂಡವೊಂದರ ನೇತೃತ್ವ ವಹಿಸಿದ್ದರು. ಆ ತಂಡವು, ರಾಷ್ಟ್ರೀಯ ಡಿಜಿಟಲ್ ಗುರುತಿನ ವ್ಯವಸ್ಥೆಯೊಂದನ್ನು (ಆಧಾರ್) ರೂಪಿಸಲು ಆಗ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ನೆರವಾಯಿತು.

ಬಡವನಿರಲಿ, ಶ್ರೀಮಂತನಿರಲಿ, ಪ್ರತಿ ಭಾರತೀಯನೂ ಹತ್ತಿರದ ಆಧಾರ್‌ ಕೇಂದ್ರಕ್ಕೆ ತೆರಳಿ, ತನ್ನ ಬಯೊಮೆಟ್ರಿಕ್ (ಬೆರಳಚ್ಚು ಮತ್ತು ಕಣ್ಣಿನ ಪಾಪೆ) ಮಾಹಿತಿಯನ್ನು ನೀಡುತ್ತಾನೆ. ನಂತರ, 12 ಅಂಕಿಗಳ ಗುರುತಿನ ಸಂಖ್ಯೆಯ ಜೊತೆ ಆತನ ಹೆಸರು, ವಿಳಾಸ, ಜನ್ಮದಿನಾಂಕ ಮತ್ತಿತರ ವಿವರಗಳು ಜೋಡಣೆ ಆಗುತ್ತವೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತ ಅವಧಿ 2014ರಲ್ಲಿ ಕೊನೆಗೊಂಡಿತು, ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂತು. ಆಧಾರ್‌ ಯೋಜನೆಯನ್ನು ಮೋದಿ ಅವರು ಮುಂದುವರಿಸಿದ್ದು ಮಾತ್ರವಲ್ಲದೆ, ಅದಕ್ಕೆ ಶಕ್ತಿ ತುಂಬಿದರು. ಇಂದು ಭಾರತದ ಒಟ್ಟು 130 ಕೋಟಿ ಜನರಲ್ಲಿ 118 ಕೋಟಿ ಜನ ಆಧಾರ್‌ ವ್ಯಾಪ್ತಿಗೆ ಬಂದಿದ್ದಾರೆ.

ಬಡವರು ಜನ್ಮ ದಾಖಲೆ ಅಥವಾ ವಾಹನ ಚಾಲನಾ ‍ಪರವಾನಗಿಯಂತಹ ಯಾವುದೇ ರೀತಿಯ ಗುರುತಿನ ಚೀಟಿ ಹೊಂದಿರದಿದ್ದ ದೇಶವೊಂದರಲ್ಲಿ ಇದೊಂದು ಕ್ರಾಂತಿ. ಏಕೆಂದರೆ, ಈಗ ಅವರು ಬ್ಯಾಂಕ್‌ ಖಾತೆ ತೆರೆಯಬಹುದು, ಸರ್ಕಾರದ ಹಣಕಾಸಿನ ನೆರವು ತಮ್ಮ ಖಾತೆಗಳಿಗೆ ನೇರವಾಗಿ ಬರುವಂತೆ ಮಾಡಬಹುದು. ಅಧಿಕಾರಿಗಳು, ಬ್ಯಾಂಕರ್‌ಗಳು, ಅಂಚೆ ಸಿಬ್ಬಂದಿಯ ಹಂತದಲ್ಲಿ ಸಬ್ಸಿಡಿ ಸೋರಿಕೆಯಾಗುವ ಗೊಡವೆ ಇಲ್ಲ. ಹೀಗೆ ಬ್ಯಾಂಕ್‌ ಖಾತೆ ತೆರೆದವರು ತಮ್ಮ ಮೊಬೈಲ್‌ ಫೋನ್ ಬಳಸಿ ಬೇಕಿರುವುದನ್ನು ಖರೀದಿಸಬಹುದು, ಮಾರಬಹುದು, ಹಣ ವರ್ಗಾವಣೆ ಮಾಡಬಹುದು ಮತ್ತು ಯಾವುದೇ ಹೊತ್ತಿನಲ್ಲಿ, ಎಲ್ಲೇ ಇದ್ದರೂ ಹಣ ಸ್ವೀಕರಿಸಬಹುದು.

ಒಂದುನೂರು ಕೋಟಿಗಿಂತ ಹೆಚ್ಚಿನ ಬಳಕೆದಾರರನ್ನು ಸಂಪಾದಿಸಿಕೊಂಡ ಡಿಜಿಟಲ್ ವ್ಯವಸ್ಥೆಗಳೆಲ್ಲವೂ (ಉದಾಹರಣೆಗೆ: ಫೇಸ್‌ಬುಕ್‌, ಗೂಗಲ್‌ ಮತ್ತು ವಾಟ್ಸ್‌ಆ್ಯಪ್‌) ಖಾಸಗಿ ವಲಯಕ್ಕೆ ಸೇರಿದವು. ಆದರೆ, ‘ಅಮೆರಿಕದ ಹೊರಗೆ ರೂಪುಗೊಂಡು ನೂರು ಕೋಟಿಗಿಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಏಕೈಕ ವ್ಯವಸ್ಥೆ, ಸರ್ಕಾರವೊಂದರ ಮೂಲಕ ರೂಪುಗೊಂಡು ಇಷ್ಟು ದೊಡ್ಡ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಏಕೈಕ ವ್ಯವಸ್ಥೆ ಆಧಾರ್‌’ ಎಂದು ಹಾರ್ವರ್ಡ್‌ ವಿಶ್ವವಿದ್ಯಾಲಯ ಪ್ರಕಟಿಸುವ ‘ಹಾರ್ವರ್ಡ್‌ ಬ್ಯುಸಿನೆಸ್ ರೀವ್ಯೂ’ ಪತ್ರಿಕೆ ಹೇಳಿದೆ. ಅತ್ಯಂತ ವೇಗವಾಗಿ ನೂರು ಕೋಟಿ ಬಳಕೆದಾರರ ಗುರಿ ತಲುಪಿದ ಹೆಗ್ಗಳಿಕೆ ಕೂಡ ಆಧಾರ್‌ಗೆ ಇದೆ.

ಈಗ ಭಾರತದ ಯಾವುದೇ ರೈತ, 2.5 ಲಕ್ಷ ಸರ್ಕಾರಿ ಸಮುದಾಯ ಕೇಂದ್ರಗಳಲ್ಲಿ ಯಾವುದೇ ಒಂದು ಕೇಂದ್ರಕ್ಕೆ ಹೋಗಿ (ಆ ಕೇಂದ್ರಗಳಲ್ಲಿ ಕಂಪ್ಯೂಟರ್, ವೈಫೈ ಸಂಪರ್ಕ ಕಲ್ಪಿಸಲಾಗಿದೆ), ತನ್ನ ವಿಶಿಷ್ಟ ಗುರುತಿನ ಸಂಖ್ಯೆ (ಆಧಾರ್) ಬಳಸಿ ಸರ್ಕಾರದ ಡಿಜಿಟಲ್ ಸೇವೆಗಳ ಜಾಲತಾಣದ ಮೂಲಕ ತನಗೆ ಅಗತ್ಯವಿರುವ ಹಲವು ಸೇವೆಗಳನ್ನು ಪಡೆದುಕೊಳ್ಳಬಹುದು.

ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೊಬೈಲ್‌ ಶಿಕ್ಷಣ ಆ್ಯಪ್‌ ಅಭಿವೃದ್ಧಿಪಡಿಸಲು ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ಅವರು ಜೊತೆಯಾಗಿ ‘ಏಕ್‌ಸ್ಟೆಪ್‌’ ಎಂಬ ಪ್ರತಿಷ್ಠಾನವೊಂದನ್ನು ಆರಂಭಿಸಿದ್ದಾರೆ. ಮೊಬೈಲ್‌ ಫೋನ್‌ ಇರುವವರು, ಡಿಜಿಟಲ್‌ ಜಾಲದ ಮೂಲಕ ವೇಗವಾಗಿ ಕಲಿಯಲು ನೆರವು ನೀಡುವ ಆ್ಯಪ್‌ಗಳು ಇವು. ಏಕ್‌ಸ್ಟೆಪ್‌ನ ಸಹಸಂಸ್ಥಾಪಕ ಮತ್ತು ಅದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶಂಕರ್ ಮರುವಾಡ ಅವರು ಹೇಳುವಂತೆ, ‘ನಮ್ಮವು, ನಿಮ್ಮ ಗಮನವನ್ನು ಹಿಡಿದಿಟ್ಟುಕೊಳ್ಳುವ ಫೇಸ್‌ಬುಕ್‌ ಹಾಗೂ ಅದೇ ಮಾದರಿಯ ಇತರ ವೇದಿಕೆಗಳಂತೆ ಅಲ್ಲ. ಏಕ್‌ಸ್ಟೆಪ್‌, ಆಧಾರ್‌ ಹಾಗೂ ಇಂತಹ ಇತರ ಸಾಮಾಜಿಕ ವೇದಿಕೆಗಳು ನಿಮ್ಮ ಶಕ್ತಿಯನ್ನು ಪುನರ್‌ ಸ್ಥಾಪಿಸುವಂಥವು. ಅದರಲ್ಲೂ ಮುಖ್ಯವಾಗಿ ಬಡವರಿಗೆ ನೆರವಾಗುವಂಥವು.’

ಇದೇ ಮಾದರಿಯ ಹೊಸತನದ ಕೆಲಸಗಳು ಇಂಧನ ಕ್ಷೇತ್ರದಲ್ಲೂ ಆಗುತ್ತಿವೆ ಎಂದು ನವೀಕರಿಸಬಹುದಾದ ಇಂಧನ ಪೂರೈಸುವ ಭಾರತದ ಅತಿದೊಡ್ಡ ಕಂಪೆನಿ ‘ಗ್ರೀನ್‌ಕೊ’ದ ಅಧ್ಯಕ್ಷ ಮಹೇಶ್ ಕೊಲ್ಲಿ ಹೇಳುತ್ತಾರೆ. ಸರ್ಕಾರಿ ಮಾಲೀಕತ್ವದ ವಿದ್ಯುತ್‌ ಪೂರೈಕೆ ಜಾಲಗಳಿಂದ ಅಂದಾಜು ಶೇಕಡ 20ರಷ್ಟು ವಿದ್ಯುತ್‌ ಕಳ್ಳತನ ಆಗುತ್ತಿತ್ತು. ಜನ ವಿದ್ಯುತ್‌ ಪೂರೈಕೆ ಜಾಲದಿಂದ ತಮ್ಮದೇ ಒಂದು ವೈರ್‌ ಎಳೆದು ವಿದ್ಯುತ್ ಕಳ್ಳತನ ಮಾಡುತ್ತಿದ್ದರು ಅಥವಾ ತಮ್ಮ ವಿದ್ಯುತ್ ಬಳಕೆದಾರರು ಯಾರು ಎಂಬುದನ್ನು ಕಂಡುಹಿಡಿಯಲು ಕಂಪೆನಿಗಳಿಗೆ ಸಾಧ್ಯವಾಗುತ್ತಿರಲಿಲ್ಲ.

ಈಗ ಸರ್ಕಾರವು, ‘ಬಳಕೆದಾರರ ಆಧಾರ್‌ ಸಂಖ್ಯೆಯನ್ನು ವಿದ್ಯುತ್‌ ಬಿಲ್‌ ಜೊತೆ ಜೋಡಿಸಬಹುದು. ನಾನು ಬಡವ ಎಂದಾದರೆ, ನನಗೆ ಬರಬೇಕಿರುವ ವಿದ್ಯುತ್‌ ಬಿಲ್‌ ಮೇಲಿನ ಸಬ್ಸಿಡಿ ಮೊತ್ತವನ್ನು ನೇರವಾಗಿ ಬಿಲ್‌ ಜೊತೆ ಜೋಡಿಸಬಹುದು’ ಎಂದು ಕೊಲ್ಲಿ ತಿಳಿಸಿದರು. ಆಂಧ್ರಪ್ರದೇಶದ ಆರು ಲಕ್ಷಕ್ಕಿಂತ ಹೆಚ್ಚಿನ ಮನೆಗಳಿಗೆ ವಿದ್ಯುತ್ ಪೂರೈಸುವ, ಒಟ್ಟು 800 ಮೆಗಾವಾಟ್‌ ವಿದ್ಯುತ್ ಉತ್ಪಾದಿಸುವ, ವಿಶ್ವದ ಅತಿದೊಡ್ಡ ಸೌರವಿದ್ಯುತ್ ಘಟಕವನ್ನು ಗ್ರೀನ್‌ಕೊ ಸಂಸ್ಥೆ ಈಚೆಗಷ್ಟೇ ನಿರ್ಮಿಸಿದೆ. ಮೂರು ಸಾವಿರ ಎಕರೆ ವಿಸ್ತೀರ್ಣದಲ್ಲಿ ಈ ಘಟಕ ತಲೆ ಎತ್ತಿದ್ದು, ಚೀನಾ ನಿರ್ಮಿತ ಸೌರ ಫಲಕಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಇನ್ನೆರಡು ಘಟಕಗಳು ತಲೆ ಎತ್ತಲಿವೆ. ಇವುಗಳನ್ನು ಕೂಡ ರಾಷ್ಟ್ರೀಯ ವಿದ್ಯುತ್ ಗ್ರಿಡ್ ಜೊತೆ ಸಂಪರ್ಕಿಸಲಾಗುತ್ತದೆ.

‘ಭಾರತದಲ್ಲಿ ಈಗ ಅನಿಲ ಆಧಾರಿತ ಅಥವಾ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಸದಾಗಿ ನಿರ್ಮಿಸುವುದಿಲ್ಲ. ಇದಕ್ಕೆ ಕಾರಣವಾಗಿರುವುದು ಸರ್ಕಾರದ ನಿರ್ಬಂಧಗಳಲ್ಲ. ಸೌರವಿದ್ಯುತ್, ಪವನವಿದ್ಯುತ್‌ ಮತ್ತು ಜಲವಿದ್ಯುತ್ ಉತ್ಪಾದನಾ ಘಟಕಗಳು ಸಬ್ಸಿಡಿಯ ನೆರವಿಲ್ಲದೆಯೇ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳ ಜೊತೆ ಸ್ಪರ್ಧಿಸುವ ಶಕ್ತಿ ಪಡೆದಿರುವುದು ಇದಕ್ಕೆ ಕಾರಣ’ ಎಂದು ಅವರು ಹೇಳಿದರು.

‘ಸುಂದರವಾದ ಕಲ್ಲಿದ್ದಲನ್ನು’ ವಾಪಸ್ ತರುವ ಬಗ್ಗೆ ಟ್ರಂಪ್‌ ಅವರು ಮಾಡುವ ಟ್ವೀಟ್‌ಗಳನ್ನು ನಾವು ಗಮನಿಸುತ್ತ ಕುಳಿತ ಹೊತ್ತಿನಲ್ಲೇ ಭಾರತವು ಟ್ವಿಟರ್‌ಗಿಂತ ಬೃಹತ್ ಆಗಿರುವ, ನೂರು ಕೋಟಿ ಬಳಕೆದಾರರ ಗುರುತಿನ ಸಂಖ್ಯೆಯ ಜಾಲವನ್ನು, ಕಲ್ಲಿದ್ದಲಿಗಿಂತ ಕಡಿಮೆ ಖರ್ಚಿನ ಬೃಹತ್ ಸೌರವಿದ್ಯುತ್ ಘಟಕಗಳನ್ನು ನಿರ್ಮಿಸಿದೆ.

ನೀವು ಗಮನಿಸದೇ ಇದ್ದಿದ್ದು ಇದನ್ನೇ – ಇವಿಷ್ಟೂ ಆಗಿರುವುದು ಒಂದೇ ಒಂದು ದೇಶದಲ್ಲಿ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT