ಕಂಪ್ಲಿ: ಇಲ್ಲಿಯ ಕರ್ನಾಟಕ ಸೇವಾ ಸ್ನೇಹಿತರ ಸಮಿತಿ ಪದಾಧಿಕಾರಿಗಳು ಹೊಸ ವರ್ಷಾಚರಣೆ ನಿಮಿತ್ತ ಸತ್ಯನಾರಾಯಣಪೇಟೆ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಂಗವಿಕಲರಿಗೆ ನೆರವು ನೀಡಿದರು.
ಪ್ರಭುಕ್ಯಾಂಪ್ನ ಅಂಗವಿಕಲ ಕಿರಣ್ ಅವರಿಗೆ ₹5,500 ಮೌಲ್ಯದ ವೀಲ್ ಚೇರ್ ವಿತರಣೆ ಮಾಡುವುದರ ಜೊತೆಗೆ ಸ್ವಾವಲಂಬನೆಗಾಗಿ ನಡೆಸುತ್ತಿದ್ದ ಈತನ ಅಂಗಡಿಯನ್ನು ದುರಸ್ತಿ ಮಾಡಿಸಿ ಮಾರಾಟಕ್ಕಾಗಿ ₹ 5 ಸಾವಿರ ಮೌಲ್ಯದ ತಿಂಡಿ ತಿನಿಸುಗಳನ್ನು ವಿತರಿಸಿದರು.
₹2 ಸಾವಿರ ವೆಚ್ಚದಲ್ಲಿ ಅಂಗವಿಕಲ ದೇವದಾಸಿ ಮಹಿಳೆ ಲಕ್ಷ್ಮಿಗೆ ಎರಡು ಊರುಗೋಲು ಮತ್ತು ಚಿಕ್ಕಜಾಯಿಗ ನೂರು ಗ್ರಾಮದ ಅಂದ ಮಲ್ಲೇಶ್ಗೆ ವಾಕಿಂಗ್ ಸ್ಟಿಕ್ ನೀಡಿ ಮಾದರಿಯಾದರು.
ಸಮಾರಂಭದಲ್ಲಿ ಕಂಪ್ಲಿಯ ಆಯುಷ್ ವೈದ್ಯ ಡಾ. ಮಲ್ಲೇಶಪ್ಪ ಮಾತನಾಡಿದರು. ಕರ್ನಾಟಕ ಸೇವಾ ಸ್ನೇಹಿತರ ಸಮಿತಿ ಮುಖಂಡ ಪೇಂಟರ್ ನೀಲಪ್ಪ ಮಾತನಾಡಿ, ‘ಕಳೆದ ಮೂರು ವರ್ಷಗಳಿಂದ ಅಂಗವಿಕಲರಿಗಾಗಿ ತಮ್ಮ ಸಮಿತಿ ವತಿಯಿಂದ ಸಹಾಯ ಹಸ್ತ ನೀಡಲಾಗುತ್ತಿದೆ’ ಎಂದು ಹೇಳಿದರು.
ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ವೀಣಾ ಗೋಣಿ ಉಪನ್ಯಾಸ, ಮಲ್ಲಿಕಾರ್ಜುನ, ಮುರುಗೇಶ್ ತಂಡ ಪ್ರದರ್ಶಿಸಿದ ಕಿರು ನಾಟಕ ಹಾಗೂ ಕಾವ್ಯ, ವೈಷ್ಣವಿ ಅವರ ಹಾಡು ಜನಮನಸೂರೆಗೊಂಡಿತು.
ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಚನ್ನಬಸವರಾಜ, ಬಸವರಾಜ, ಹೊಸಪೇಟೆ ಡಾನ್ ಬೋಸ್ಕೊ ಕ್ರೀಮ್ ವಿಭಾಗದ ಎಂ.ಡಿ ಕ್ಯಾಂಪ್ ಅನಿತಾ, ಸ್ನೇಹಿತರ ಸಮಿತಿಯ ಪ್ರಿಂಟಿಂಗ್ ಪ್ರೆಸ್ ಬಿ. ಬಸವರಾಜ, ಸ್ಪ್ರೇ ಪೇಂಟರ್ ಬಸವರಾಜ, ರೆಗ್ಯುಲೇಟರ್ ಕ್ಯಾಂಪ್ ಅಶೋಕ್ ಇದ್ದರು.