ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲೇಕಣಿ ಕಾರ್ಯವೈಖರಿಗೆ ಬಾಲಕೃಷ್ಣನ್‌ ಮೆಚ್ಚುಗೆ

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಫೊಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಅವರ ಕಾರ್ಯವೈಖರಿಯ ಕುರಿತು ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಎಫ್‌ಒ) ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

‘ಸಿಇಒ ಸಲೀಲ್‌ ಪಾರೇಖ್‌ ಅವರಿಗೆ ನ್ಯಾಯೋಚಿತ ವೇತನ ನಿಗದಿ ಮಾಡುವ ಮೂಲಕ ನಂದನ್‌ ನಿಲೇಕಣಿ ಅವರು ಹಿಂದಿನ ಆಡಳಿತ ಮಂಡಳಿ ಮಾಡಿದ್ದ ತಪ್ಪುಗಳನ್ನು ಸರಿಪಡಿಸಿದ್ದಾರೆ. ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಹೇಳಿದ್ದಾರೆ.

‘ಉನ್ನತ ಹುದ್ದೆಯಲ್ಲಿ ಇರುವವರಿಗೆ ಅವರ ಸಾಮರ್ಥ್ಯದ ಆಧಾರದ ಮೇಲೆ ಉತ್ತೇಜನಾ ಮೊತ್ತ ನಿಗದಿ ಮಾಡುವ ವ್ಯವಸ್ಥೆ ರೂಪಿಸಬೇಕು. ಆ ವ್ಯವಸ್ಥೆಯು ಉತ್ತಮ ಪ್ರಗತಿ ಸಾಧಿಸುವ ಮೂಲಕ ಷೇರುದಾರರ ಮೌಲ್ಯ ಹೆಚ್ಚಿಸುವಂತಿರಬೇಕು. ವೇತನ, ವಿಶೇಷ ಭತ್ಯೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ಷೇರುದಾರರಿಗೆ ಆ ಬಗ್ಗೆ ಸೂಕ್ತ ಕಾರಣಗಳನ್ನು ನೀಡಿ ವಿವರಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾರೇಖ್‌ ಅವರ ವೇತನವನ್ನು ₹ 6.5 ಕೋಟಿಗೆ ನಿಗದಿಪಡಿಸಲಾಗಿದೆ. ಅವರ ಕಾರ್ಯವೈಖರಿಯು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿದ್ದರೆ 2018–19ನೇ ಹಣಕಾಸು ವರ್ಷಾಂತ್ಯದಲ್ಲಿ ಅವರು ಸಂಸ್ಥೆಯಿಂದ ₹ 9.75 ಕೋಟಿಗಳಷ್ಟು ಉತ್ತೇಜನಾ ಮೊತ್ತ (ವೇರಿಯೇಬಲ್‌ ಪೇ) ಪಡೆಯಲು ಅರ್ಹವಾಗಿರಲಿದ್ದಾರೆ.

ಹಿಂದಿನ ಮಂಡಳಿ ವಿರುದ್ಧ ಟೀಕೆ:  ‘ಹಿಂದಿನ ಆಡಳಿತ ಮಂಡಳಿಯ ಕಾರ್ಯವೈಖರಿ ಸ್ಪಷ್ಟವಾಗಿರಲಿಲ್ಲ. ಇನ್ಫೊಸಿಸ್‌ ಸಹ ಸ್ಥಾಪಕರು ಪಾಲಿಸಿಕೊಂಡು ಬಂದಿದ್ದ ಸಂಸ್ಕೃತಿ ಅಥವಾ ಮೌಲ್ಯಯುತವಾದ ವ್ಯವಸ್ಥೆಯನ್ನು ಅರ್ಥವೇ ಮಾಡಿಕೊಂಡಿರಲಿಲ್ಲ ಎನ್ನುವುದು ದುರದೃಷ್ಟಕರ’ ಎಂದು ಟೀಕಿಸಿದ್ದಾರೆ.

‘ಯಾವುದೇ ಸ್ಪಷ್ಟ ಕಾರಣ ಇಲ್ಲದೆ ಸಿಕ್ಕಾ ಅವರ ವೇತನವನ್ನು ಹೆಚ್ಚಿಸಲಾಗಿತ್ತು. ಆದರೆ ಸಂಸ್ಥೆಯಲ್ಲಿದ್ದ ಉಳಿದವರ ವೇತನದ ಏರಿಕೆ ಪ್ರಮಾಣ ಕಡಿಮೆ ಇತ್ತು. ಉತ್ತೇಜನಾ ಮೊತ್ತವೂ ಹೆಚ್ಚಿಗೆ ಇರಲಿಲ್ಲ. ಉತ್ತಮ ಕೌಶಲ ಹೊಂದಿರುವವರನ್ನು ಆಕರ್ಷಿಸಲು  ಸಿಇಒಗೆ ನೀಡುವ ಉತ್ತೇಜನಾ ಮೊತ್ತ ನ್ಯಾಯೋಚಿತವಾಗಿರಬೇಕು. ಆದರೆ ಉಳಿದ ಸಂಸ್ಥೆಗಳ ಸಿಇಒಗೆ ಇರುವ ಉತ್ತೇಜನಾ ಮೊತ್ತದೊಂದಿಗೆ ಹೋಲಿಕೆ ಆಗುವಂತಿರಬೇಕು’.

‘ಸ್ಥಾಪಕರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾಗ ಉನ್ನತ ಹುದ್ದೆಯಲ್ಲಿ ಇರುವವ ವೇತನ ನ್ಯಾಯೋಚಿತವಾಗಿತ್ತು. ವಿಪರೀತ ಅನ್ನಿಸುವಷ್ಟು ವೇತನದಲ್ಲಿ ಹೆಚ್ಚಳ ಆಗುತ್ತಿರಲಿಲ್ಲ. ಆರ್ಥಿಕ ಸಮಸ್ಯೆ ಎದುರಾದಾಗ ಏಕಾಏಕಿ ಅದನ್ನು ಸಂಸ್ಥೆಯ ಮೇಲೆ ಹೊರಿಸುತ್ತಿರಲಿಲ್ಲ’ ಎಂದೂ ಹೇಳಿದ್ದಾರೆ.

ಪುನರ್‌ರಚನೆಗೆ ಒತ್ತಾಯ: ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಕೆಲವು ನಿರ್ದೇಶಕರನ್ನು ಕೈಬಿಟ್ಟು ಹೊಸಬರನ್ನು ನೇಮಿಸುವಂತೆ ಒತ್ತಾಯಿಸಿದ್ದಾರೆ.

ಈ ಹಿಂದೆ ಆಗಿರುವ ತಪ್ಪನ್ನು ಪರಿಶೀಲಿಸಿ ಸರಿಪಡಿಸಲು ಪರಿಣಾಮಕಾರಿ ಆಡಳಿತ ಮಂಡಳಿಯ ಅಗತ್ಯವಿದೆ ಎಂದು ಬಾಲಕೃಷ್ಣನ್‌
ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT