ಲಖನೌ: ಸರ್ಕಾರದ ಆಡಳಿತ ಕಚೇರಿಗಳು, ರಾಜ್ಯ ಸಾರಿಗೆ ನಿಗಮದ ಬಸ್ಗಳು, ಪಠ್ಯ ಪುಸ್ತಕಗಳು ಮತ್ತು ಶಾಲಾ ಕಟ್ಟಡಗಳ ಬಳಿಕ ಈಗ ಹಜ್ ಭವನಕ್ಕೂ ಉತ್ತರ ಪ್ರದೇಶ ಸರ್ಕಾರ ಕೇಸರಿ ಬಣ್ಣ ಬಳಿದಿತ್ತು. ಇದಕ್ಕೆ ಕೆಲವು ಮುಸ್ಲಿಂ ಮೌಲ್ವಿಗಳು ಆಕ್ರೋಶ ವ್ಯಕ್ತ ಪಡಿಸಿದ್ದರು.
ಗುರುವಾರದವರೆಗೆ ಹಜ್ ಭವನದ ಗೋಡೆಗಳು ಬಿಳಿ ಮತ್ತು ಹಸಿರು ಬಣ್ಣ ಹೊಂದಿತ್ತು. ಆದರೆ ಶುಕ್ರವಾರ ಬೆಳಗ್ಗಿನ ಹೊತ್ತಿಗೆ ಅದು ಕೇಸರಿ ಬಣ್ಣಕ್ಕೆ ತಿರುಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಜ್ ಕಮಿಟಿ ಕಾರ್ಯದರ್ಶಿ ಗೋಡೆಗೆ ಕೇಸರಿ ಬಣ್ಣ ಬಳಿದುದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದಿದ್ದಾರೆ.
ಬಣ್ಣ ಬಳಿದ ಖಾಸಗಿ ಗುತ್ತಿಗೆದಾರರು ಬಣ್ಣ ಆಯ್ಕೆ ಮಾಡುವಲ್ಲಿ ತಪ್ಪೆಸಗಿದ್ದಾರೆ ಎಂದು ಹೇಳಿದ ಹಜ್ ಕಮಿಟಿ ಬಣ್ಣ ಬಳಿದ ಖಾಸಗಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಇದೀಗ ಕೇಸರಿ ಬಣ್ಣ ತೆಗೆದು ಗೋಡೆಗೆ ಕ್ರೀಮ್ ಬಣ್ಣ ಹಚ್ಚುವ ಕಾರ್ಯ ಶನಿವಾರ ನಡೆದಿದೆ.