ಹಾನಗಲ್: ‘ತಾಲ್ಲೂಕಿನಲ್ಲಿ ಎಸ್.ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ₹15 ಕೋಟಿ ಬಿಡುಗಡೆಯಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಡಾಂಬರೀಕರಣಕ್ಕಾಗಿ ₹15 ಕೋಟಿ ಜೊತೆಗೆ ಹೆಚ್ಚುವರಿಯಾಗಿ ₹15 ಕೋಟಿ ಅನುದಾನಯಾಗಿದೆ’ ಎಂದು ಶಾಸಕ ಮನೋಹರ ತಹಸೀಲ್ದಾರ್ ಹೇಳಿದರು.
ತಾಲ್ಲೂಕಿನ ಆರೆಗೊಪ್ಪ ಗ್ರಾಮದಲ್ಲಿ ಭಾನುವಾರ ₹ 93 ಲಕ್ಷದಲ್ಲಿ ಚಿಕ್ಕೇರಿಹೊಸಳ್ಳಿ–ಆರೆಗೊಪ್ಪ ರಸ್ತೆ ಡಾಂಬರೀಕರಣ ಮತ್ತು ಪಕ್ಕದ ಇಡ್ಲಿಬಟ್ಟಿ ಓಣಿಯಲ್ಲಿ ₹ 13.27 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಕೃಷಿ, ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ತಹಸೀಲ್ದಾರ್ ಮಾತನಾಡಿ, ‘ರಾಜ್ಯ ಸರ್ಕಾರದ ಬೆಳೆಸಾಲ ಮನ್ನಾ ಯೋಜನೆಯಲ್ಲಿ ತಾಲ್ಲೂಕಿನಲ್ಲಿ 4510 ರೈತರಿಗೆ ಲಾಭ ತಟ್ಟಿದೆ. ₹11.99 ಕೋಟಿ ಸಾಲ ಮನ್ನಾ ಸೌಲಭ್ಯ ದಕ್ಕಿದೆ. ಈ ಪೈಕಿ ಮೊದಲ ಹಂತದಲ್ಲಿ ಈಗಾಗಲೇ 1918 ರೈತರ ₹ 4 ಕೋಟಿ ಸಾಲಮನ್ನಾ ಆಗಿದೆ’ ಎಂದು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಸದಸ್ಯೆ ಸರೋಜವ್ವ ಹೊಸಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಗೌರಾಪೂರ, ಉಪಾಧ್ಯಕ್ಷ ಅಣ್ಣಪ್ಪ ಚವ್ಹಾಣ, ಮುಖಂಡರಾದ ಆರ್.ಎಸ್.ಪಾಟೀಲ, ವಿಷ್ಣುಕಾಂತ ಜಾಧವ, ಪ್ರಭು ದೊಡ್ಡಕುರುಬರ, ಲೋಕೋಪಯೋಗಿ ಎಂಜಿನಿಯರ್ ಗೋವಿಂದ ಚಪ್ಪರ, ಮಹಾಬಲೇಶ್ವರ ಇದ್ದರು.
ಅಂಕಿ–ಅಂಶ:
ತಾಲ್ಲೂಕಿನ ಬೆಳೆಸಾಲ ಮನ್ನಾ ವಿವರ
*4510 ರೈತ ಫಲಾನುಭವಿಗಳು
*ಒಟ್ಟು ₹11.99 ಕೋಟಿ ಸಾಲ ಮನ್ನಾ
*ಸದ್ಯ 1918 ರೈತರ ₹ 4 ಕೋಟಿ ಸಾಲ ಮನ್ನಾ