ದೆಹಲಿಯ ಶಾಹೀನ್ಬಾಗ್ ಸುತ್ತ ಬಾಂಗ್ಲಾದೇಶಿ ನುಸುಳುಕೋರರು ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಶ್ವಿನಿ ಉಪಾಧ್ಯಾಯ ಸೇರಿ ಬಿಜೆಪಿಯ ಹಲವು ಮುಖಂಡರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ದೆಹಲಿ ಸರ್ಕಾರದ ಕುರಿತು ಜನಾಭಿಪ್ರಾಯ ಸಂಗ್ರಹಿಸುತ್ತಿದ್ದ ವರದಿಗಾರರೊಬ್ಬರು ಮಸೀದಿಯಿಂದ ಹೊರಬರುತ್ತಿದ್ದ ಕೆಲವರ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಕೆಲವರು ತಮಗೆ ಹಿಂದಿ ಬರುವುದಿಲ್ಲ, ತಾವು ಬಾಂಗ್ಲಾದೇಶೀಯರು ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ರೋಹಿಂಗ್ಯಾ ಸಮುದಾಯದ ನುಸುಳುಕೋರರು ದೆಹಲಿಯಲ್ಲಿ ನಿರ್ಭೀತಿಯಿಂದ ಓಡಾಡಿಕೊಂಡಿದ್ದಾರೆ ಎಂಬ ವಿವರಣೆಯನ್ನು ಈ ವಿಡಿಯೊ ಜೊತೆ ನೀಡಲಾಗಿದೆ.