ಒಂದಿಷ್ಟು ಜನರ ಗುಂಪು ಗೋಧಿ ಹಿಟ್ಟಿನ ಚೀಲಕ್ಕಾಗಿ ಬೀದಿಯಲ್ಲಿ ಬಡಿದಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಲ್ಲಿ ಜನರಿಗೆ ತಿನ್ನಲೂ ಅನ್ನವಿಲ್ಲ ಎಂಬುದನ್ನು ಈ ವಿಡಿಯೊ ಸೂಚಿಸುತ್ತದೆ ಎಂದು ಜಾಲತಾಣ ಬಳಕೆದಾರರು ಉಲ್ಲೇಖಿಸಿದ್ದಾರೆ. ಉತ್ತರ ಪ್ರದೇಶದ ಶಾಸಕ ಶಲಭ್ ಮಣಿ ತ್ರಿಪಾಠಿ ಸೇರಿದಂತೆ ಹಲವರು ಈ ವಿಡಿಯೊವನ್ನು ಹಂಚಿಕೊಂಡಿದ್ದು, ಶ್ರೀಲಂಕಾದಂತೆ ಪಾಕಿಸ್ತಾನದ ಸ್ಥಿತಿಯೂ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಭಾರತದ ಸ್ಥಿತಿ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, ಈ ವಿಡಿಯೊ ಹಳೆಯದು.