ಗುರುಗ್ರಾಮ: ಹರಿಯಾಣದ ನೂಹ್ ಜಿಲ್ಲೆಯ ತಾವ್ಡು ಪಟ್ಟಣದ ಬಳಿ ಸಂಚರಿಸುತ್ತಿದ್ದ ಬಸ್ನಲ್ಲಿ ಬೆಂಕಿ ಹೊತ್ತಿಕೊಂಡು 9 ಜನರು ಸಜೀವ ದಹನವಾಗಿ, 15 ಜನರು ಗಾಯಗೊಂಡಿರುವ ಘಟನೆ ಶನಿವಾರ ಮಧ್ಯರಾತ್ರಿ 2 ಗಂಟೆಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂಡ್ಲಿ– ಮಾನೇಸರ್– ಪಲ್ವಾಲ್ (ಕೆಎಂಪಿ) ಎಕ್ಸ್ಪ್ರೆಸ್ ವೇನಲ್ಲಿ ಈ ದುರಂತ ಸಂಭವಿಸಿದೆ. ಬಸ್ನಲ್ಲಿ ಸುಮಾರು 60 ಜನರಿದ್ದರು. ಎಲ್ಲರೂ ಪಂಜಾಬ್ನ ಹೋಷಿಯಾಪುರ್ ಮತ್ತು ಲೂಧಿಯಾನಕ್ಕೆ ಸೇರಿದವರು ಮತ್ತು ಎಲ್ಲರೂ ಸಂಬಂಧಿಕರು. ಮಥುರಾ ಮತ್ತು ವೃಂದಾವನ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ ಆರು ಮಂದಿ ಮಹಿಳೆಯರು ಮತ್ತು ಮೂರು ಮಂದಿ ಪುರುಷರಿದ್ದಾರೆ. ಗಾಯಗೊಂಡಿರುವವರ ಆರೋಗ್ಯ ಸ್ಥಿರವಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದು ಕಂಡ ಕೂಡಲೇ, ಬಸ್ಸನ್ನು ಹಿಂಬಾಲಿಸಿದ ಬೈಕ್ ಸವಾರರು ಬಸ್ ನಿಲ್ಲಿಸುವಂತೆ ಚಾಲಕನಿಗೆ ತಿಳಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.