ಕೋಯಿಕ್ಕೋಡ್: ಲ್ಯಾಂಡ್ ಆಗುವ ವೇಳೆ ರನ್ವೇನಿಂದ ಜಾರಿ ಬಿದ್ದು ತುಂಡಾದ ವಿಮಾನದಲ್ಲಿದ್ದವರ ರಕ್ಷಣೆಗೆ ಧಾವಿಸಿದ ಸ್ಥಳೀಯರು ಮತ್ತು ಅಧಿಕಾರಿಗಳ ಕಾರ್ಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಶಂಸಿಸಿದ್ದಾರೆ. ಇಷ್ಟೇ ಅಲ್ಲ, ಸಾಮಾಜಿಕ ತಾಣಗಳಲ್ಲಿ ಕೇರಳಿಗರು ಮತ್ತು ಮಲಯಾಳಿಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.
ಕೋಯಿಕ್ಕೋಡ್ ಮತ್ತು ಮಲಪುರ ಜನರ ಉಪಕಾರದ ಕುರಿತು ಟ್ವಿಟರ್ನಲ್ಲಿ ಚರ್ಚೆಗಳು ನಡೆಯುತ್ತಿದ್ದು, #Malappuram ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.
ದುಬೈನಿಂದ 190 ಮಂದಿಯನ್ನು ಹೊತ್ತು ಕೋಯಿಕೋಡ್ನ ಕರಿಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಏರ್ ಇಂಡಿಯಾ ವಿಮಾನ ಶುಕ್ರವಾರ ರಾತ್ರಿ 7.30ರ ಸಮಯದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ರನ್ವೇನಿಂದ 35 ಅಡಿ ಆಳದ ಕಣಿವೆಗೆ ಬಿದ್ದು ಎರಡು ತುಂಡಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ಗಳೂ ಸೇರಿ 18 ಮಂದಿ ಮೃತಪಟ್ಟು 123ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ನಿನ್ನೆ, ಸ್ಥಳೀಯರು ಮತ್ತು ಅಧಿಕಾರಿಗಳು ಕ್ಷಿಪ್ರವಾಗಿ ಸ್ಪಂದಿಸಿ, ಪ್ರತಿಕೂಲ ಹವಾಮಾನ, ಕೋವಿಡ್ ಭೀತಿಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಹೀಗಾಗಿ ಪರಿಸ್ಥಿತಿಯೇ ಬದಲಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ರಕ್ತದಾನ ಮಾಡಲು ಆಸ್ಪತ್ರೆಯಲ್ಲಿ ಜನರು ಉದ್ದದ ಸರತಿ ಸಾಲುಗಳಲ್ಲಿ ನಿಂತದ್ದು ಒಂದು ಉದಾಹರಣೆಯಾಗಿ ನಿಂತಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.
Yesterday, the fast response of local people and officials made all the difference. They braved bad weather and COVID fears to rescue their fellow beings. The long queues of people who wanted to donate blood was just one example.
— Pinarayi Vijayan (@vijayanpinarayi) August 8, 2020
ವಿಮಾನ ದುರಂತಕ್ಕೀಡಾಗುತ್ತಲೇ ಸ್ಥಳೀಯರು ಸ್ಪಂದಿಸಿದ ರೀತಿ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಗಾಯಾಳುಗಳನ್ನು ವಿಮಾನದಿಂದ ಹೊರಗೆ ತರುತ್ತಿರುವುದು, ಅವರನ್ನು ಆಸ್ಪತ್ರೆಗೆ ಸೇರಿಸಲು ಜನ ವಾಹನಗಳನ್ನು ತಂದಿದ್ದು, ರಕ್ತದಾನ ಮಾಡಲು ಆಸ್ಪತ್ರೆ ಎದುರು ಯುವಕರು ಸರಿ ರಾತ್ರಿಯಲ್ಲೂ, ಕೋವಿಡ್ ಭೀತಿಯನ್ನೂ ಲೆಕ್ಕಿಸದೇ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು, ಚಿತ್ರಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಅಗುತ್ತಿವೆ. ಹೀಗಾಗಿ #Malappuram ಹ್ಯಾಷ್ ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಗಿತ್ತು. ಟ್ವಿಟರ್ನಲ್ಲಿ ಸ್ಥಳೀಯರ ಉಪಕಾರವನ್ನು ಸ್ಮರಿಸಲಾಯಿತು.
‘ಜನರ ಈ ರೀತಿಯ ಸ್ಪಂದನೆಯನ್ನು ನಾವು ಹಲವು ಬಾರಿ ನೋಡಿದ್ದೇವೆ. ಪ್ರತಿಕೂಲ ಸನ್ನಿವೇಶದಲ್ಲಿ ಕೇರಳದ ಜನರು ಅದರ ವಿರುದ್ಧ ಒಗ್ಗೂಡುತ್ತಾರೆ. ಮಾನವೀಯತೆ ಎಂಬ ಒಳ್ಳೆಯತನ ನಮ್ಮ ಸಮಾಜದ ತಳಪಾಯವಾಗಿದೆ. ಈ ಸನ್ನಿವೇಶದಲ್ಲಿ ನಾವು ಮಲಪುರ ಮತ್ತು ಕೋಯಿಕ್ಕೋಡ್ ಜನರನ್ನು ಸ್ಮರಿಸೋಣ,’ ಎಂದು ವಿಜಯನ್ ಟ್ವಿಟರ್ನಲ್ಲಿ ಹೇಳಿದ್ದಾರೆ.
‘ಕೇರಳದ ಸ್ಥಳೀಯರು ಕಾರ್ಯರೂಪಕ್ಕಿಳಿದಿದ್ದಾರೆ. ಪ್ರವಾಹದ, ಸಾಂಕ್ರಾಮಿಕ ರೋಗ ಮತ್ತು ವಿಮಾನ ದುರಂತದ ಸಮಯದಲ್ಲಿ ಮಲಯಾಳಿಗಳು ನಮ್ಮ ಚೇತನ ಮತ್ತು ಏಕತೆಯನ್ನು ಪ್ರದರ್ಶಿಸಿದ್ದಾರೆ. ಅಪಘಾತ ಸಂಭವಿಸಿದಾಗ, ಜನ ಧರ್ಮ, ಜಾತಿ, ವರ್ಗವನ್ನು ಲೆಕ್ಕಿಸದೆ ತಮ್ಮನ್ನು ತಾವು ಪರಿಸ್ಥಿತಿಗೆ ಒಡ್ಡಿಕೊಳ್ಳುತ್ತಾರೆ. ಅದೇ ನನ್ನ ಕೇರಳ ಮಾದರಿ,’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರು ಹೇಳಿದ್ದಾರೆ.
Kerala kocals swing into action: What sets Malayalis apart is our spirit &unity, during floods, the pandemic &now the aircrash. When a mishap occurs, people throw themselves into the situation regardless of religion/caste/class. That’s my#KeralaModel! https://t.co/Wz5GlgwJP1
— Shashi Tharoor (@ShashiTharoor) August 8, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.