ನವದೆಹಲಿ (ಪಿಟಿಐ): ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿ ದಿನವಾದ ಗುರುವಾರ ಅವರಿಗೆ ಕಾಂಗ್ರೆಸ್ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಇಲ್ಲಿಯ ಶಾಂತಿವನದಲ್ಲಿರುವ ನೆಹರೂ ಸ್ಮಾರಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುಷ್ಪನಮನ ಸಲ್ಲಿಸಿದರು.
’ನಾವು ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಗೌರವ ಸಲ್ಲಿಸಿದೆವು. ಅವರು ಭಾರತ ಸೇರಿದಂತೆ ಇಡೀ ಪ್ರಪಂಚಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಅತ್ಯುನ್ನತ ಬುದ್ಧಿಶಕ್ತಿ ಹೊಂದಿದ್ದ ಅವರು ನಿಜವಾದ ದೇಶಭಕ್ತರಾಗಿದ್ದರು. ಅವರು ಆಧುನಿಕ ಭಾರತದ ಶಿಲ್ಪಿ‘ ಎಂದು ಕಾಂಗ್ರೆಸ್ ಅಧಿಕೃತ ಟ್ವಿಟರ್ನಲ್ಲಿ ಹೇಳಿದೆ.
’ನೆಹರೂ ಅವರು ಭಾರತದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಉತ್ಸಾಹದಿಂದ ಅವಿರತವಾಗಿ ಶ್ರಮಿಸಿದರು‘ ಎಂದು ’ನೆಹರೂ ಸ್ಮರಣೆ‘ ಎಂದು ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.
ನೆಹರೂ ಹೇಳಿಕೆಯನ್ನು ಪೋಸ್ಟ್ ಮಾಡಿರುವ ರಾಹುಲ್, ’ಅವರ ಪುಣ್ಯಸ್ಮರಣೆಯ ದಿನ ಅವರ ತಿಳುವಳಿಕೆಯ ಮಾತುಗಳು ನೆನಪಾಗುತ್ತಿವೆ‘ ಎಂದಿದ್ದಾರೆ.
ಭಾರತದ ಮೊದಲ ಪ್ರಧಾನಿಯಾದ ನೆಹರೂ ಆಗಸ್ಟ್ 1947ರಿಂದ ಮೇ 1964 ರವರೆಗೆ ಅಧಿಕಾರ ನಿರ್ವಹಿಸಿದ್ದರು. 1964ರಲ್ಲಿ ನಿಧನ ಹೊಂದಿದರು.