ಬೆಂಗಳೂರು: ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿರುವುದಕ್ಕೆ ಉಚಿತ ಕೊಡುಗೆಗಳಿಗಾಗಿ ಮತ ಹಾಕಿದ್ದರ ಫಲಿತಾಂಶ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವ್ಯಾಖ್ಯಾನಿಸಿದ್ದಾರೆ.
ಆಕಾಶದ ತುಂಬ ಕವಿದ ಹೊಗೆ ಮಿಶ್ರಿತ ಗಾಳಿಯಲ್ಲಿ ಮುಚ್ಚಿ ಹೋಗಿರುವ ಇಂಡಿಯಾ ಗೇಟ್ ಚಿತ್ರವನ್ನು ಟ್ವೀಟ್ ಮಾಡಿರುವ ಬಿ.ಎಲ್. ಸಂತೋಷ್ ಅವರು ಉಚಿತ ಕೊಡುಗೆಗಳಿಗೆ ಮತ ಹಾಕಿದ್ದರ ಫಲಿತಾಂಶವಿದು ಎಂದಿದ್ದಾರೆ.
'ಉಚಿತ ವಿದ್ಯುತ್, ಉಚಿತ ನೀರು, ಉಚಿತ ಬಸ್ ಸಂಚಾರ, ವಾಹನಗಳ ಆನ್ ಮತ್ತು ಆಫ್ ಎಂಬ ನೌಟಂಕಿ, ಸಮ ಮತ್ತು ಬೆಸ ಎಂಬ ನಾಟಕಗಳಿಗೆ ಮತ ಹಾಕಿದ್ದರ ಫಲಿತಾಂಶ ಇವತ್ತಿನ ದೆಹಲಿಯ ಆಕಾಶ ದೇಶವಾಸಿಗಳೇ...' ಎಂದು ಸಂತೋಷ್ ಟ್ವೀಟ್ ಮಾಡಿದ್ದಾರೆ.
'ರೆವಡಿ (ಒಂದು ಬಗೆಯ ತಿನಿಸು) ರಾಜಕೀಯದ ಬಗ್ಗೆ ಜಾಗ್ರತೆಯಿಂದಿರಿ' ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
The result of voting for free bijli , free paani , free bus travel , Gaadi On & Off nautanki , Odd & even drama .... TODAY’S DELHI SKIES for you countrymen ... Beware of revdi politics . pic.twitter.com/NiM86DHH5Y
ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಟ್ಟಿರುವುದರಿಂದ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದ ವರೆಗೆ ರಜೆ ಘೋಷಿಸಲಾಗಿದೆ. ಶೇ 50ರಷ್ಟು ಸಿಬ್ಬಂದಿ ವರ್ಗಕ್ಕೆ ಮನೆಯಲ್ಲೇ ಕೆಲಸ ಮಾಡುವ ಅವಕಾಶ ನೀಡಲಾಗಿದೆ. ಖಾಸಗಿ ಕಂಪನಿಗಳಿಗೂ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.