ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜಾತಿ ಕುರಿತಂತೆ ಮಾತನಾಡಿರುವ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಖಂಡಿಸಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಹಂಸರಾಜ್ ಅಹೀರ್ ಅವರು, ಕೂಡಲೇ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.
ಜಾತಿಗಳ ಕುರಿತಂತೆ ‘ಬುದ್ದಿಹೀನ ಮಾತು’ ಗಳಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶದಲ್ಲಿ ವಿಭಜನೆಯ ಬೀಜ ಬಿತ್ತಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಗೌರವಾನ್ವಿತ ಪ್ರಧಾನ ಮಂತ್ರಿಗಳ ಬಗ್ಗೆ ರಾಹುಲ್ ಗಾಂಧಿಯವರು ನೀಡಿರುವ ಬುದ್ಧಿಹೀನ ಹೇಳಿಕೆ ಕುರಿತಂತೆ ದೇಶದಾದ್ಯಂತ ಇರುವ ಕೋಟ್ಯಂತರ ಹಿಂದುಳಿದ ವರ್ಗಗಳ ಜನ ಕೋಪದಿಂದ ಕುದಿಯುತ್ತಿದ್ದಾರೆ’ ಎಂದು ಅಹೀರ್ ಹೇಳಿದ್ದಾರೆ.
ಮೋದಿ ಅವರು ಬರುವ ‘ಮೋಧ್ ಘಾಂಛಿ’ ಸಮುದಾಯವನ್ನು ಸಮೀಕ್ಷೆ ವರದಿ ಆಧರಿಸಿ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಗೆ ಸೇರಿಸುವ ಕುರಿತಂತೆ 1994ರ ಜುಲೈ 25ರಲ್ಲೇ ಗುಜರಾತ್ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಬಳಿಕ, 1997ರಲ್ಲಿ ‘ಮೋಧ್ ಘಾಂಛಿ’ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಗೆ ಸೇರಿಸುವ ಕುರಿತಂತೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅದರನ್ವಯ, 1999 ಅಕ್ಟೋಬರ್ 27ರಲ್ಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘ಆ ಎರಡೂ ನಿರ್ಧಾರಗಳು ಆದಾಗ ಮೋದಿಯವರು ಯಾವುದೇ ಅಧಿಕಾರದಲ್ಲಿ ಇರಲಿಲ್ಲ ’ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಓಬಿಸಿ ಬಗ್ಗೆ ರಾಹುಲ್ ಗಾಂಧಿ ದ್ವೇಷವನ್ನು ನೋಡಿದರೆ ಭಯಾನಕವೆನಿಸುತ್ತಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷರು ಇದನ್ನು ಸ್ಪಷ್ಟವಾಗಿ ತಮ್ಮ ಪೂರ್ವಜರಿಂದ ಅನುವಂಶಿಕವಾಗಿ ಪಡೆದುಕೊಂಡಿದ್ದಾರೆ ಎಂದು ಅವರು ಕುಟುಕಿದ್ದಾರೆ.