ಅಮೇಠಿ: ಈ ಮೊದಲು, ನೆಹರೂ–ಗಾಂಧಿ ಕುಟುಂಬದ ‘ಭದ್ರಕೋಟೆ’ಯಾಗಿದ್ದ ಉತ್ತರ ಪ್ರದೇಶದ ಅಮೇಠಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಈ ಬಾರಿ ಪಕ್ಷಾಂತರಿಗಳನ್ನು ಮುಂದಿಟ್ಟುಕೊಂಡು ಗೆಲ್ಲಲು ಹೊರಟಿವೆ. ಈ ಕ್ಷೇತ್ರದ ಮೇಲಿದ್ದ ಹಿಡಿತವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಬಿಜೆಪಿ ಹಿಡಿತ ಬಿಗಿಯಾಗಿದೆ.
2019ರಲ್ಲಿ ಕಾಂಗ್ರೆಸ್ನಿಂದ ಹೊರಬಂದಿದ್ದ ಹಿರಿಯ ಮುಖಂಡ ಸಂಜಯ್ ಸಿಂಹ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷವೂ ಸಹ ಪಕ್ಷಾಂತರಿ ಆಶಿಶ್ ಶುಕ್ಲಾ ಅವರನ್ನು ಉಮೇದು ವಾರರನ್ನಾಗಿ ಘೋಷಿಸಿದೆ.ಬಿಎಸ್ಪಿಯಲ್ಲಿದ್ದ ಶುಕ್ಲಾ 2017ರಲ್ಲಿ ಬಿಜೆಪಿ ಸೇರಿದ್ದರು. ಈಗ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಫೆ. 27ರಂದು ಇಲ್ಲಿ ಮತದಾನ ನಡೆಯಲಿದೆ. ಸಿಂಹ ಅವರನ್ನು ಅಮೇಠಿಯ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ ತಕ್ಷಣವೇ ಶುಕ್ಲಾ ಅವರು ಕಾಂಗ್ರೆಸ್ಗೆ ಸೇರ್ಪಡೆಯಾದರು. ಅವರನ್ನು ಅಮೇಠಿಯ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಲಾಯಿತು. ಇಂದಿರಾ ಗಾಂಧಿ ಅವರ ಅವಧಿಯಿಂದಲೂ ಈ ಕ್ಷೇತ್ರದ ಉಮೇದುವಾರಿಕೆಯು ದೇಶದ ಗಮನ ಸೆಳೆದಿದೆ.
ಪಕ್ಷ ಸೇರುತ್ತಿದ್ದಂತೆಯೇ ಸಿಂಹ ಮತ್ತು ಶುಕ್ಲಾ ಅವರು ಹೊಸ ಪಕ್ಷಗಳಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. ತಮ್ಮ ಪಕ್ಷಗಳ ಪ್ರಣಾಳಿಕೆ ಹಿಡಿದು ಮತದಾರರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಈ ಮಧ್ಯೆ, ಸಮಾಜವಾದಿ ಪಕ್ಷ (ಎಸ್ಪಿ), ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಗಾಯತ್ರಿ ಪ್ರಜಾಪತಿ ಅವರ ಪತ್ನಿಯನ್ನು ಇಲ್ಲಿಂದ ಕಣಕ್ಕಿಳಿಸಿದೆ. ಮಾಯಾವತಿ ನೇತೃತ್ವದ ಬಿಎಸ್ಪಿಯು ತನ್ನ ಹಳೆಯ ದಲಿತ–ಬ್ರಾಹ್ಮಣಸೂತ್ರವನ್ನು ನೆಚ್ಚಿಕೊಂಡಿದ್ದು, ರಾಗಿಣಿ ತಿವಾರಿ ಅವರನ್ನು ಹೆಸರಿಸಿದೆ.
ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಬಳಿಕಅಮೇಠಿ ಕದನ ಹೆಚ್ಚು ಕಾವು ಪಡೆಯಿತು. ಈ ಚುನಾವಣೆಯಲ್ಲಿ ಅವರು ಸೋತರೂ, 2019ರಲ್ಲಿ ರಾಹುಲ್ ವಿರುದ್ಧ ಜಯಭೇರಿ ಬಾರಿಸಿದ್ದರು.
2017ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಇಲ್ಲಿ ಹೊಸ ಇತಿಹಾಸ ಬರೆಯಿತು. ಅಮೇಠಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಪಕ್ಷ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಉಳಿದಿದ್ದ ಗೌರಿಗಂಜ್ ಕ್ಷೇತ್ರವು ಎಸ್ಪಿ ಪಾಲಾಯಿತು. ಕಾಂಗ್ರೆಸ್ ತನ್ನ ಭದ್ರ
ನೆಲೆಯಲ್ಲಿ ಒಂದೂ ಕ್ಷೇತ್ರ ಗೆಲ್ಲದೆ ಸೊನ್ನೆ ಸುತ್ತಿತ್ತು.
ಕಾರ್ಯತಂತ್ರ
*ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಅಮೇಠಿ ಸಂಸದೆ ಸ್ಮೃತಿ ಇರಾನಿ ಅವರ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಸಿಂಹ ಅವರು ಮತ ಕೇಳುತ್ತಿದ್ದಾರೆ
*ಒಂದೊಮ್ಮೆ ರಾಹುಲ್ ಗಾಂಧಿ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿ ಒಂದು ಲಕ್ಷಕ್ಕೂ ಹೆಚ್ಚು ಮತ ಗಳಿಸಿದ್ದ ಶುಕ್ಲಾ ಅವರು ಪ್ರಿಯಾಂಕಾ ಗಾಂಧಿ ಅವರ ‘ನಾನು ಹುಡುಗಿ ಹೋರಾಡಬಲ್ಲೆ’ ಅಭಿಯಾನ ಹಾಗೂ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಿದ್ದಾರೆ
*ಎಸ್ಪಿ ಸರ್ಕಾರದಲ್ಲಿ ಸಚಿವರಾಗಿದ್ದ ಹಾಗೂ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ತಮ್ಮ ಪತಿ ಪ್ರಜಾಪತಿ ಅವರಿಗೆ ನ್ಯಾಯ ದೊರಕಿಸುವ ಉದ್ದೇಶದಿಂದ ಅವರ ಪತ್ನಿ ಮಹಾರಾಜಿ ಪ್ರಜಾಪತಿ ಅವರು ಸ್ಪರ್ಧಿಸುತ್ತಿದ್ದಾರೆ.
*ಬ್ರಾಹ್ಮಣ–ದಲಿತ ಮತಗಳನ್ನು ಕ್ರೋಡೀಕರಿಸಲು ಬಿಎಸ್ಪಿ ಉದ್ದೇಶಿಸಿದೆ
ವಿವಿಧ ಪಕ್ಷಗಳ ಕಾರ್ಯತಂತ್ರ
* ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಅಮೇಠಿ ಸಂಸದೆ ಸ್ಮೃತಿ ಇರಾನಿ ಅವರ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಸಿಂಹ ಅವರು ಮತ ಕೇಳುತ್ತಿದ್ದಾರೆ
* ಒಂದೊಮ್ಮೆ ರಾಹುಲ್ ಗಾಂಧಿ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿ ಒಂದು ಲಕ್ಷಕ್ಕೂ ಹೆಚ್ಚು ಮತ ಗಳಿಸಿದ್ದ ಶುಕ್ಲಾ ಅವರು ಪ್ರಿಯಾಂಕಾ ಗಾಂಧಿ ಅವರ ‘ನಾನು ಹುಡುಗಿ ಹೋರಾಡಬಲ್ಲೆ’ ಅಭಿಯಾನ ಹಾಗೂ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಿದ್ದಾರೆ
* ಎಸ್ಪಿ ಸರ್ಕಾರದಲ್ಲಿ ಸಚಿವರಾಗಿದ್ದ ಹಾಗೂ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ತಮ್ಮ ಪತಿ ಪ್ರಜಾಪತಿ ಅವರಿಗೆ ನ್ಯಾಯ ದೊರಕಿಸುವ ಉದ್ದೇಶದಿಂದ ಅವರ ಪತ್ನಿ ಮಹಾರಾಜಿ ಪ್ರಜಾಪತಿ ಅವರು ಸ್ಪರ್ಧಿಸುತ್ತಿದ್ದಾರೆ. ತಮ್ಮ ಮಗ ಹಾಗೂ ಇಬ್ಬರು ಮಕ್ಕಳೊಂದಿಗೆ ಚುನಾವಣಾ ಪ್ರಚಾರದಲ್ಲಿ ಅವರು ತೊಡಗಿದ್ದಾರೆ
* ಕ್ಷೇತ್ರದ ಒಟ್ಟು 3.48 ಲಕ್ಷ ಮತದಾರರ ಪೈಕಿ 80 ಸಾವಿರ ಬ್ರಾಹ್ಮಣರು, 30 ಸಾವಿರ ಠಾಕೂರ್, 25 ಸಾವಿರ ಮುಸ್ಲಿಂ, 30 ಸಾವಿರ ದಲಿತ ಹಾಗೂ 1.25 ಲಕ್ಷ ಒಬಿಸಿ ಮತದಾರರು ಇದ್ದಾರೆ. ಬ್ರಾಹ್ಮಣ–ದಲಿತ ಮತಗಳನ್ನು ಕ್ರೋಡೀಕರಿಸಲು ಬಿಎಸ್ಪಿ ಉದ್ದೇಶಿಸಿದೆ
* ಅಭ್ಯರ್ಥಿಗಳಾದ ಸಿಂಹ ಅವರು ಠಾಕೂರ್, ಶುಕ್ಲಾ ಹಾಗೂ ತಿವಾರಿ ಅವರು ಬ್ರಾಹ್ಮಣ, ಮಹಾರಾಜಿ ಅವರು ಒಬಿಸಿ ಸಮುದಾಯಕ್ಕೆ ಸೇರಿದ್ದಾರೆ
ಹೇಗಿದೆ ಜನಮನ...
‘ನಾನು ಹುಡುಗಿ, ಹೋರಾಡಬಲ್ಲೆ’ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆರಂಭಿಸಿರುವ ಅಭಿಯಾನವೂ ಪ್ರಯೋಜನವಿಲ್ಲ ಎನ್ನುತ್ತಾರೆ ಕಾಲೇಜು ಹುಡುಗಿಯರು. ‘ನಾವು ಓದಬೇಕೇ ಅಥವಾ ಗೂಂಡಾಗಳ ವಿರುದ್ಧ ಹೋರಾಡಬೇಕೇ’ ಎಂದು ವಿದ್ಯಾರ್ಥಿನಿ ಪ್ರೀತಿ ಅವರು ಪ್ರಶ್ನಿಸುತ್ತಾರೆ. ತಮ್ಮ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವವರಿಗೆ ಮಾತ್ರ ತಮ್ಮ ಮತ ಎನ್ನುತ್ತಾರೆ ಪಾಂಡೆಪುರ ಬಜಾರ್ನ ನಿವಾಸಿಗಳಾದ ಜಾಂಗ್ ಬಹಾದ್ದೂರ್ ಸಿಂಗ್, ಲೋಕನಾಥ್ ಯಾದವ್ ಹಾಗೂ ರಾಮ್ ಬಹಾದ್ದೂರ್ ಯಾದವ್.
ರಾಹುಲ್ ಗಾಂಧಿ ಅವರ ವರ್ಚಸ್ಸಾಗಲೀ, ಜಾತಿ ಸಮೀಕರಣವಾಗಲೀ ಇಲ್ಲಿ ನಡೆಯುವುದಿಲ್ಲ ಎನ್ನುತ್ತಾರೆ ಸ್ಥಳೀಯ ಬಿಜೆಪಿ ಮುಖಂಡ ರಾಜೇಶ್ ಆಗ್ರಹಿ. ಪೆಟ್ರೋಲಿಯಂ ಸಚಿವಾಲಯ, ಸಿಆರ್ಪಿಎಫ್ ಕ್ಯಾಂಪ್ ಹಾಗೂ ಏಳು ರಾಷ್ಟ್ರೀಯ ಹೆದ್ದಾರಿಗಳು ಸಾಧ್ಯವಾಗಿದ್ದು ಕಾಂಗ್ರೆಸ್ ಅವಧಿಯಲ್ಲಿ ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಶಾಂತ್ ತ್ರಿಪಾಠಿ. ‘ರಾಹುಲ್ ಗಾಂಧಿ ಅವಧಿಯಲ್ಲಿ ಗೌರಿಗಂಜ್ನಲ್ಲಿ ಒಂದೇ ಒಂದು ಸಿಟಿಸ್ಕ್ಯಾನ್ ಕೇಂದ್ರ ಇರಲಿಲ್ಲ. ಸ್ಮೃತಿ ಇರಾನಿ ಅವರು ಕ್ಷೇತ್ರಕ್ಕೆ ಒಂಬತ್ತು ಆಮ್ಲಜನಕ ಘಟಕ ತಂದಿದ್ದಾರೆ’ ಎಂಬುದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದುರ್ಗೇಶ್ ತ್ರಿಪಾಠಿ ಅವರ ಮಾತು.
* ಅಮೇಠಿಯು ಈಗ ಇಂದಿರಾ ಕುಟುಂಬದ ಭದ್ರಕೋಟೆಯಾಗಿ ಉಳಿದಿಲ್ಲ.ಇದು ಇನ್ನುಮುಂದೆ ಕೋಟೆಯೂ ಅಲ್ಲ ಅಥವಾ ಇಲ್ಲಿ ಕಾಂಗ್ರೆಸ್ನ ಯಾವ ರಾಜನೂ ನೋಡಲು ಸಿಗುವುದಿಲ್ಲ.
-ಸಂಜಯ್ ಸಿಂಹ, ಬಿಜೆಪಿ ಅಭ್ಯರ್ಥಿ
* ಸಂಚಿನ ಭಾಗವಾಗಿ ತಮ್ಮ ತಂದೆ ಗಾಯತ್ರಿ ಪ್ರಜಾಪತಿ ಅವರ ವಿರುದ್ಧ ಸುಳ್ಳು ಪ್ರಕರಣ ಹೂಡಲಾಗಿದೆ. ಅವರ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ.
-ಅನಿಲ್ ಪ್ರಜಾಪತಿ, ಗಾಯತ್ರಿ ಪ್ರಜಾಪತಿ ಅವರ ಮಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.