ಮುಂಬೈ: ‘ಕೋವಿಡ್–19 ಪಿಡುಗಿನ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ಜೊತೆಗೆ, ಭಾರತ ವಿರೋಧಿ ಶಕ್ತಿಗಳು ಈ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವ ಬಗ್ಗೆ ಜನರು ಎಚ್ಚರದಿಂದ ಇರಬೇಕು’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
ನಾಗಪುರದಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಿಂದ ವೆಬ್ಕ್ಯಾಸ್ಟ್ ಮೂಲಕ ಮಾತನಾಡಿದ ಅವರು, ‘ಪ್ರಚೋದಿಸುವವರ ಸಂಖ್ಯೆಗೇನೂ ಕೊರತೆ ಇಲ್ಲ. ಇದು ಆಕ್ರೋಶ, ಆವೇಶಕ್ಕೆ ಕಾರಣವಾಗುತ್ತದೆ. ಅದರಿಂದ ಅಚಾತುರ್ಯಗಳು ನಡೆಯುತ್ತವೆ. ಇಂತಹ ಅವಕಾಶಗಳಿಗೆ ಕಾಯುತ್ತಿರುವವರು ಪರಿಸ್ಥಿತಿಯ ಲಾಭ ಪಡೆಯುತ್ತಾರೆ’ ಎಂದರು.
ಪಾಲ್ಘರ್ನಲ್ಲಿ ಇತ್ತೀಚೆಗೆ ಇಬ್ಬರು ಸಾಧುಗಳನ್ನು ಹತ್ಯೆ ಮಾಡಿದ ಘಟನೆಯನ್ನು ಪ್ರಸ್ತಾಪಿಸಿದ ಅವರು, ‘ಈ ಘಟನೆ ಬಗ್ಗೆ ಹಲವಾರು ಜನರು ಮಾತನಾಡುತ್ತಿದ್ದಾರೆ. ಇಂಥ ಘಟನೆ ಘಟಿಸಬೇಕಿತ್ತು ಎಂದೆನಿಸುತ್ತದೆಯೇ? ಆ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲಿಸರು ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು.
‘ಭಾರತ ನಿನ್ನನ್ನು ತುಂಡು ಮಾಡುತ್ತೇವೆ ಎಂದು ಹೇಳುತ್ತಿರುವ ವ್ಯಕ್ತಿಗಳು ಜನರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಇಂಥ ಜನರಿಗೆ ಸಮುದಾಯದ ಮುಖಂಡರು ಬುದ್ಧಿ ಹೇಳಬೇಕು. ದೇಶದ 139 ಕೋಟಿ ಜನರೂ ಭಾರತ ಮಾತೆಯ ಮಕ್ಕಳು. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ’ ಎಂದೂ ಭಾಗವತ್ ಹೇಳಿದರು.