ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳ ಹಿಂಸಾಚಾರದ ಬಗ್ಗೆ ‘ಪ್ರೀತಿಯ ಅಂಗಡಿ’ ತೆರೆಯುತ್ತಿರುವ ರಾಹುಲ್‌ ಮೌನವೇಕೆ: ಬಿಜೆಪಿ

Published 11 ಜುಲೈ 2023, 13:32 IST
Last Updated 11 ಜುಲೈ 2023, 13:32 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ನಡೆದ ಹಿಂಸಾಚಾರವು ಸರ್ಕಾರ ಪ್ರಾಯೋಜಿತ ಎಂದು ಟೀಕಿಸಿರುವ ಬಿಜೆಪಿ, ಮಾಧ್ಯಮ ವರದಿಗಳ ಪ್ರಕಾರ ಈ ಗಲಭೆಯಲ್ಲಿ ಕನಿಷ್ಠ 45 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ.

‘ತೃಣಮೂಲ ಕಾಂಗ್ರೆಸ್‌ನ ದಾದಾಗಿರಿ ರಾಜಕೀಯವು ಮಂಗಳವಾರ ಮತ ಎಣಿಕೆ ನಡೆಯುತ್ತಿದ್ದಾಗಲೂ ಮುಂದುವರಿದಿತ್ತು’ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

‘ಬಿಜೆಪಿ ಮತ್ತು ಇತರ ಪಕ್ಷಗಳ ಪ್ರತಿನಿಧಿಗಳನ್ನು ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡದಂತೆ ತಡೆಯಲಾಗಿದೆ’ ಎಂದಿರುವ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನಿರ್ದಯಿ ಎಂದು ಟೀಕಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಬಿಜೆಪಿಯು ಖಂಡಿಸಿದೆ. ಆದರೆ ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಮೌನವಾಗಿವೆ’ ಎಂದಿದ್ದಾರೆ.

‘ಪ್ರೀತಿಯ ಅಂಗಡಿ’ ತೆರೆಯುತ್ತಿರುವ ರಾಹುಲ್‌ ಗಾಂಧಿ ಅವರು ಈ ಹಿಂಸಾಚಾರದ ಕುರಿತು ಯಾಕೆ ಮೌನವಾಗಿದ್ದಾರೆ’ ಎಂದೂ ಅವರು ಪ್ರಶ್ನಿಸಿದ್ದಾರೆ.

ಜುಲೈ 8ರಂದು ನಡೆದ ಗಲಭೆಯಲ್ಲಿ 15 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.

‘ಅಸ್ಸಾಂನಲ್ಲಿ 133 ಮಂದಿಗೆ ಆಶ್ರಯ’(ಗುವಾಹಟಿ ವರದಿ): ಪಶ್ಚಿಮ ಬಂಗಾಳದ 133 ಮಂದಿ ಸಂತ್ರಸ್ತರು ಅಸ್ಸಾಂನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ ತಿಳಿಸಿದ್ದಾರೆ.

‘ಸಂತ್ರಸ್ತರಿಗೆ ಪರಿಹಾರ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ ಮತ್ತು ಅವರಿಗೆ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ.

ವಿರೋಧ ಪಕ್ಷಗಳ ಕಾರ್ಯಕರ್ತರಿಗೆ ಆಶ್ರಯ ನೀಡಿರುವುದಕ್ಕೆ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೃತಜ್ಞತೆ ಸಸಲ್ಲಿಸಿದ್ದಾರೆ.

‘ಹಿಮಂತ ಅವರು ಸುಳ್ಳು ಹೇಳಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳದ ಸಚಿವೆ ಶಶಿ ಪಂಜಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT