ಪಟ್ನಾ: ‘ಅತ್ಯಾಚಾರಿಗಳನ್ನು ರಕ್ಷಿಸುತ್ತಿರುವ ಬಿಜೆಪಿಯು, ಅವರು ಪರಾರಿಯಾಗಲು ಸಹಾಯ ಮಾಡುತ್ತಿದೆ’ ಎಂದು ರಾಷ್ಟ್ರೀಯ ಜನತಾದಳದ ಮುಖಂಡ ತೇಜಸ್ವಿ ಪ್ರಸಾದ್ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
‘ಕರ್ನಾಟಕದಲ್ಲಿ ನಡೆದಿರುವ ಲೈಂಗಿಕ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸುತ್ತಿರುವುದೇಕೆ? ಬಿಜೆಪಿ ನಾಯಕರ ‘ಬೇಟಿ ಬಚಾವೋ–ಬೇಟಿ ಪಡಾವೋ’ ಘೋಷಣೆ ಏನಾಯಿತು? ಅಂದಾಜು 2,500 ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿಯು ಜರ್ಮನಿಗೆ ಪರಾರಿಯಾಗಲು ಕೇಂದ್ರದ ಬಿಜೆಪಿ ಸರ್ಕಾರ ನೆರವಾಗಿದೆ’ ಎಂದು ದೂರಿದ್ದಾರೆ.
‘ಮಣಿಪುರ ಘಟನೆ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಮೌನವಹಿಸಿದ್ದ ಪ್ರಧಾನಿಯು, ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಯೊಂದಿಗೆ ಕರ್ನಾಟಕದಲ್ಲಿ ವೇದಿಕೆ ಹಂಚಿಕೊಂಡು ಚುನಾವಣಾ ಪ್ರಚಾರ ನಡೆಸಿದ್ದು ಎಲ್ಲರಿಗೂ ತಿಳಿದ ವಿಚಾರವೇ’ ಎಂದಿದ್ದಾರೆ.