‘ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಅಸ್ಸಾಂನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ನಡೆಸಿರುವುದು ಕೋಮುಗಲಭೆಯನ್ನು ಸೃಷ್ಟಿಸುವ ರಾಜಕೀಯ ಪಿತೂರಿಯಾಗಿದೆ’ ಎಂದು ಸಿಎಂ ಹಿಮಂತ ಬಿಸ್ವ ಶರ್ಮ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರಚಾರ ನಡೆಸುತ್ತಾರೋ ಅಲ್ಲಿ ಬಿಜೆಪಿ ಗೆಲ್ಲುತ್ತದೆ. ಆ ಕಾರಣಕ್ಕಾಗಿ ಬಿಜೆಪಿಗೆ ಅವರ ಅಗತ್ಯವಿದೆ’ ಎಂದು ಹೇಳಿದರು.
ಲೋಕಸಭೆ ಚುನಾವಣೆ ನಂತರ ಗಾಂಧಿಯನ್ನು ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ತಿಳಿಸಿದರು.
ಭಾರತ ಜೋಡೊ ನ್ಯಾಯ ಯಾತ್ರೆ ವೇಳೆ ನಿಗದಿತ ಮಾರ್ಗವನ್ನು ಬಿಟ್ಟು ಗುವಾಹಟಿ ನಗರಕ್ಕೆ ಪ್ರವೇಶಿಸಲು ಬ್ಯಾರಿಕೇಡ್ಗಳನ್ನು ಭೇದಿಸುವಂತೆ ಬೆಂಬಲಿಗರನ್ನು ಪ್ರಚೋದಿಸಿದ ಆರೋಪದ ಮೇಲೆ ಅಸ್ಸಾಂ ಪೊಲೀಸರು ರಾಹುಲ್ ಗಾಂಧಿ ಮತ್ತು ಇತರ ಹಲವು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
‘ರಾಹುಲ್ ಗಾಂಧಿ ಅವರು ಕೋಮು ಘರ್ಷಣೆಗಳನ್ನು ಪ್ರಚೋದಿಸಲು ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ನಾಗಾಂವ್ ಮತ್ತು ಮೋರಿಗಾಂವ್ ಜಿಲ್ಲೆಗಳಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಕೈಗೊಳ್ಳಲು ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು’ ಎಂದು ಅವರು ಆರೋಪಿಸಿದರು.
ಜನವರಿ 18ರಂದು ಅಸ್ಸಾಂನಲ್ಲಿ ಪ್ರಾರಂಭಗೊಂಡ ಭಾರತ ಜೋಡೊ ನ್ಯಾಯ ಯಾತ್ರೆಯು ಇಂದು (ಗುರುವಾರ) ಅಸ್ಸಾಂನಲ್ಲಿ ತನ್ನ ಪ್ರಯಾಣವನ್ನು ಮುಗಿಸಿತು. ಬಳಿಕ ಇಲ್ಲಿನ ಗೋಲಕ್ಗಂಜ್ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿತು.