ಪಟ್ನಾ: ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಸರ್ಕಾರವು ತನ್ನದೇ ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಂಬಿಕೆ ಕಳೆದುಕೊಂಡಿದೆ. ಇದೇ ಕಾರಣದಿಂದಾಗಿ ಎದುರಾಳಿಗಳನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರ್ಜೆಡಿ ಶನಿವಾರ ಆರೋಪಿಸಿದೆ.
ಪಕ್ಷದ ವಕ್ತಾರ ರಿಷಿ ಮಿಶ್ರಾ, ‘ಕಾರ್ಯಕರ್ತರು, ನಾಯಕರಿಂದ ಮತಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರಿತಿರುವ ಬಿಜೆಪಿಯು ಇ.ಡಿ, ಸಿಬಿಐ ಮತ್ತು ಆದಾಯ–ತೆರಿಗೆ ಇಲಾಖೆಯನ್ನು ಛೂ ಬಿಡುತ್ತಿದೆ’ ಎಂದು ಹೇಳಿದರು.
‘ತನಿಖಾ ಸಂಸ್ಥೆಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರೆ, ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿರುವ ಅಜಿತ್ ಪವಾರ್ ಅವರ ನಿವಾಸದಲ್ಲೂ ಶೋಧ ನಡೆಸಲಿ’ ಎಂದು ಸವಾಲು ಹಾಕಿದರು.