ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ ಗಾಯಕ ಶುಭನೀತ್‌ ಸಿಂಗ್‌ ಕಾರ್ಯಕ್ರಮ ರದ್ದು ಮಾಡಿದ ಬುಕ್‌ ಮೈ ಷೋ

Published 20 ಸೆಪ್ಟೆಂಬರ್ 2023, 9:34 IST
Last Updated 20 ಸೆಪ್ಟೆಂಬರ್ 2023, 9:34 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ಮೂಲದ ಕೆನಡಾದ ಗಾಯಕ ಶುಭನೀತ್‌ ಸಿಂಗ್‌ ಅವರ ಭಾರತ ಪ್ರವಾಸವನ್ನು ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ ‘ಬುಕ್‌ ಮೈ ಷೋ’ ರದ್ದು ಮಾಡಿದೆ.

ಶುಭನೀತ್ ಸಿಂಗ್‌ ಖಾಲಿಸ್ತಾನಿಗಳ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಬುಕ್‌ ಮೈ ಷೋ ಆ್ಯಪ್‌ ಅನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದರು.

ಬಾಯ್ಕಾಟ್‌ ಕೂಗು ಬೆನ್ನಲ್ಲೇ ಕಾರ್ಯಕ್ರಮ ರದ್ದು ಮಾಡಿರುವ ‘ಬುಕ್‌ ಮೈ ಷೋ’ ಆ್ಯಪ್‌, 7–10 ದಿನಗಳಲ್ಲಿ ಟಿಕೆಟ್‌ ಮೊತ್ತವನ್ನು ಸಂಪೂರ್ಣ ಮರುಪಾವತಿ ಮಾಡುವುದಾಗಿ ‘ಎಕ್ಸ್‌’ನಲ್ಲಿ ಬರೆದುಕೊಂಡಿದೆ.

’ಗಾಯಕ ಶುಭನೀತ್‌ ಸಿಂಗ್‌ ಅವರ ಭಾರತದ ಪ್ರವಾಸವನ್ನು ರದ್ದು ಮಾಡಲಾಗಿದೆ. ಹೀಗಾಗಿ ಈ ಪ್ರದರ್ಶನಕ್ಕೆ ಟಿಕೆಟ್‌ ಕಾಯ್ದಿರಿಸಿದ ಗ್ರಾಹಕರ ಸಂಪೂರ್ಣ ಟಿಕೆಟ್ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. 7–10 ಕೆಲಸದ ದಿನಗಳಲ್ಲಿ ಮೂಲ ಖಾತೆಗೆ ಟಿಕೆಟ್‌ನ ಮೊತ್ತ ವರ್ಗಾವಣೆಯಾಗುತ್ತದೆ’ ಎಂದು ಬುಕ್‌ ಮೈ ಷೋ ಹೇಳಿದೆ.

ಇದಕ್ಕೂ ಮುನ್ನ ಬುಧವಾರ ಬೆಳಿಗ್ಗೆ ‘ಎಕ್ಸ್‌’ನಲ್ಲಿ #UninstallBookMyShow ಎನ್ನುವ ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿತ್ತು.

ಖಾಲಿಸ್ತಾನ ‍ಪ್ರತ್ಯೇಕತಾವಾದಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜಾರ್ (45) ಕೊಲೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರಡೋ ಆರೋಪಿಸಿದ್ದರು. ಬಳಿಕ ಭಾರತದ ಅಧಿಕಾರಿಯನ್ನು ಸೋಮವಾರ ಕೆನಡಾ ಉಚ್ಚಾ‌ಟಿಸಿತ್ತು. ಇದರ ಬೆನ್ನಲ್ಲೇ ಮಂಗಳವಾರ ಭಾರತವು, ಕೆನಡಾದ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿತ್ತು.

ಇದರಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ್ದು, ವ್ಯಾಪಾರ ಸಂಬಂಧ ನಡೆಯಬೇಕಿದ್ದ ಮಾತುಕತೆ ನಿಂತು ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT