ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RML ಆಸ್ಪತ್ರೆಯ ಲಂಚಾವತಾರ ಬಯಲಿಗೆಳೆದ CBI: ಹೃದ್ರೋಗ ತಜ್ಞರು ಸೇರಿ 9 ಜನರ ಬಂಧನ

Published 8 ಮೇ 2024, 14:07 IST
Last Updated 8 ಮೇ 2024, 14:07 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದ ಸಿಬಿಐ, ಇಬ್ಬರು ಹೃದ್ರೋಗ ತಜ್ಞರನ್ನೂ ಒಳಗೊಂಡಂತೆ ಒಂಬತ್ತು ಜನರನ್ನು ಬುಧವಾರ ಬಂಧಿಸಿದೆ.

ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಅಜಯ್ ರಾಜ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಪರ್ವತಗೌಡ ಚನ್ನಪ್ಪಗೌಡ ಬಂಧಿತ ವೈದ್ಯರು. ಸ್ಟಂಟ್‌ ಹಾಗೂ ಇನ್ನಿತರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಮಾರಾಟಗಾರರಿಂದ ಲಂಚ ಪಡೆದ ಆರೋಪ ಇವರ ಮೇಲಿದೆ.

‘ಈ ಪ್ರಕರಣದಲ್ಲಿ ಉಪಕರಣಗಳ ಪೂರೈಕೆದಾರ ನಾಗಪಾಲ್ ಟೆಕ್ನಾಲಜೀಸ್‌ನ ನರೇಶ ನಾಗಪಾಲ್ ಅವರನ್ನೂ ಬಂಧಿಸಲಾಗಿದೆ. ತಮ್ಮ ಉಪಕರಣಗಳ ಖರೀದಿಗೆ ಶಿಫಾರಸು ಮಾಡಲು ನಾಗಪಾಲ್ ಅವರು ಪರ್ವತಗೌಡ ಅವರಿಗೆ ₹2.48 ಲಕ್ಷ ಲಂಚ ನೀಡಿದ್ದರು. ಭಾರ್ತಿ ಮೆಡಿಕಲ್ ಟೆಕ್ನಾಲಜೀಸ್‌ನ ಭರತ್ ಸಿಂಗ್ ದಲಾಲ್ ಅವರು ಡಾ. ರಾಜ್ ಅವರಿಗೆ ಯುಪಿಐ ಮೂಲಕ ಎರಡು ಬಾರಿ ಹಣ ಪಾವತಿಸಿದ್ದಾರೆ. ಅಬ್ರಾರ್ ಅಹಮದ್ ಅವರು ಆಸ್ಪತ್ರೆಯ ಕ್ಯಾಥ್‌ ಲ್ಯಾಬ್‌ ಮುಖ್ಯಸ್ಥ ರಜನೀಶ್ ಕುಮಾರ್ ಅವರಿಗೆ ಲಂಚ ನೀಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಜನೀಶ್ ಕುಮಾರ್, ಕಚೇರಿ ಸಹಾಯಕ ಭುವಲ್ ಜೈಸ್ವಾಲ್ ಹಾಗೂ ಸಂಜಯ್ ಕುಮಾರ್ ಹಾಗೂ ವಿಕಾಸ್ ಕುಮಾರ್ ಎಂಬುವವರನ್ನು ಸಿಬಿಐ ಬಂಧಿಸಿದೆ. ಇಬ್ಬರೂ ವೈದ್ಯರನ್ನು ಭೇಟಿ ಮಾಡಿಸಿದಕ್ಕಾಗಿ ಭುವಲ್‌ಗೆ ಲಂಚ ಪಾವತಿಯಾಗಿದೆ. ಜತೆಗೆ ವೈದ್ಯಕೀಯ ಪ್ರಮಾಣಪತ್ರ ನೀಡಲು ಸಂಜಯ್ ಅವರು ಲಂಚ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಗಳನ್ನು ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ನ್ಯಾಯಾಲಯ ಇವರನ್ನು ಮೇ 14ರವರೆಗೆ ಸಿಬಿಐ ಬಂಧನಕ್ಕೆ ಒಪ್ಪಿಸಿದೆ. 

ವೈದ್ಯರು ಮತ್ತು ವೈದ್ಯಕೀಯ ಉಪಕರಣಗಳ ಮಾರಾಟಗಾರರ ನಡುವಿನ ಸಂಬಂಧದ ವಿರುದ್ಧ ನಡೆದ 2ನೇ ಪ್ರಮುಖ ದಾಳಿ ಇದಾಗಿದೆ. ಕಳೆದ ವರ್ಷ ಸಫದರ್‌ಜಂಗ್ ಆಸ್ಪತ್ರೆಯ ನರರೋಗ ವಿಭಾಗದ ಶಸ್ತ್ರಚಿಕಿತ್ಸಕ ಮನೀಶ್ ರಾವ್‌ ಅವರು ವೈದ್ಯಕೀಯ ಉಪಕರಣಗಳ ಮಾರಾಟಗಾರರಿಂದ ಲಂಚ ಸ್ವೀಕರಿಸುವಾಗ ಬಂಧನಕ್ಕೊಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT