ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ ಸೇನೆಗೆ ಭಾರತೀಯ ಯುವಕರು: ಎಫ್‌ಐಆರ್‌ ದಾಖಲಿಸಿದ ಸಿಬಿಐ

Published 8 ಮಾರ್ಚ್ 2024, 15:09 IST
Last Updated 8 ಮಾರ್ಚ್ 2024, 15:09 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗದ ಆಮಿಷವೊಡ್ಡಿ ಭಾರತದ ಯುವಕರನ್ನು ರಷ್ಯಾಕ್ಕೆ ಕರೆದೊಯ್ದು ಅಲ್ಲಿನ ಸೇನೆಗೆ ಸೇರ್ಪಡೆಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದೆ.

ಮಾನವ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ರಷ್ಯಾದ ಕ್ರಿಸ್ಟಿನಾ ಮತ್ತು ರಷ್ಯಾದಲ್ಲಿ ನೆಲೆಸಿರುವ ತಮಿಳುನಾಡಿನ ಸಂತೋಷ್‌ ಹಾಗೂ ರಾಜಸ್ಥಾನದ ಮೊಹಮ್ಮದ್‌ ಮೊಯಿನುದ್ದಿನ್‌ ಚಿಪ್ಪಾ ಎಂಬುವವರ ಹೆಸರನ್ನು ಎಫ್‌ಐಆರ್‌ನಲ್ಲಿ  ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೀಸಾ ಸೇವೆ ಒದಗಿಸುವ ವಿವಿಧ ಸಂಸ್ಥೆಗಳ ನಿರ್ದೇಶಕರಾದ ಸುಯಶ್‌ ಮುಕುಟ್‌, ರಾಕೇಶ್‌ ಪಾಂಡೆ, ಮಂಜೀತ್‌ ಸಿಂಗ್‌ ಮತ್ತು ಫೈಸಲ್‌ ಅಬ್ದುಲ್‌ ಮುತಾಲಿಬ್ ಖಾನ್ ಎಂಬುವವರ ಹೆಸರುಗಳೂ ಎಫ್‌ಐಆರ್‌ನಲ್ಲಿವೆ ಎಂದು ವಿವರಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಒಟ್ಟು 19 ಮಂದಿಯ ಹೆಸರುಗಳನ್ನು ಉಲ್ಲೇಖಿಸಲಾಗಿದ್ದು, ಇದರಲ್ಲಿ ದೆಹಲಿ, ಮುಂಬೈ, ಠಾಣೆ ಮತ್ತು ಹರಿಯಾಣದಲ್ಲಿ ವೀಸಾ ಸೇವೆ ಒದಗಿಸುವ ಸಂಸ್ಥೆಗಳ ನಿರ್ದೇಶಕರು ಮತ್ತು ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದ ಏಜೆಂಟರುಗಳ ಹೆಸರುಗಳೂ ಒಳಗೊಂಡಿವೆ ಎಂದಿದ್ದಾರೆ.

ವಿಶ್ವವಿದ್ಯಾಲಯಕ್ಕೆ ಪ್ರವೇಶ ನೀಡುವುದಾಗಿ ಮತ್ತು ಉದ್ಯೋಗದ ಆಮಿಷವೊಡ್ಡಿ ಕರೆದೊಯ್ದಿದ್ದ ಭಾರತದ ಕೆಲವು ಯುವಕರು ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಲ್ಲಿ ಮೃತಪಟ್ಟ ಬಳಿಕ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದೆ. 

ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡುವುದಾಗಿಯೂ ಆಮಿಷವೊಡ್ಡಿ ಈ ಏಜೆಂಟರುಗಳು ವಿದ್ಯಾರ್ಥಿಗಳನ್ನೂ ರಷ್ಯಾದ ಕರೆದೊಯ್ದಿದ್ದಾರೆ ಎನ್ನಲಾಗಿದೆ.

‘ರಷ್ಯಾಕ್ಕೆ ತಲುಪಿದ ಬಳಿಕ ಯುವಕರ ಪಾಸ್‌ಪೋರ್ಟ್‌ಗಳನ್ನು ಏಜೆಂಟರುಗಳು ಕಸಿದುಕೊಳ್ಳುತ್ತಿದ್ದರು. ಬಳಿಕ ಅವರಿಗೆ ಯುದ್ಧ ತರಬೇತಿ ನೀಡಿ, ರಷ್ಯಾದ ಸೇನೆಯ ಸಮವಸ್ತ್ರಗಳನ್ನು ನೀಡಲಾಗುತ್ತಿತ್ತು. ಅನಂತರ ಅವರನ್ನು ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಲ್ಲಿ ಮುಂಚೂಣಿಯಲ್ಲಿ ನಿಯೋಜಿಸಲಾಗುತ್ತಿತ್ತು’ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ದೆಹಲಿ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಸಂಸ್ಥೆಯೊಂದು 180 ಮಂದಿಯನ್ನು ರಷ್ಯಾಕ್ಕೆ ಕಳುಹಿಸಿದೆ. ಇವರಲ್ಲಿ ಬಹುಪಾಲು ಮಂದಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದೇಶದಾದ್ಯಂತ 10 ಕಡೆಗಳಲ್ಲಿ ಸಿಬಿಐ ಗುರುವಾರ ಶೋಧ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT