ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಂಸತ್‌ ಭವನ, ಸೆಂಟ್ರಲ್‌ ವಿಸ್ತಾಗೆ ಕಾಡಿದ ಕಾನೂನು ಅಡೆತಡೆಗಳು

Published 28 ಮೇ 2023, 15:54 IST
Last Updated 28 ಮೇ 2023, 15:54 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೆಂಟ್ರಲ್‌ ವಿಸ್ತಾ ಪುನರ್ ಅಭಿವೃದ್ಧಿ ಸೇರಿ ನೂತನ ಸಂಸತ್‌ ಭವನದ ಕಟ್ಟಡ ಕಳೆದ ಐದು ವರ್ಷಗಳಲ್ಲಿ ಹಲವಾರು ಕಾನೂನು ಅಡೆತಡೆಗಳನ್ನು ದಾಟಿ ಭಾನುವಾರ ಲೋಕಾರ್ಪಣೆಯಾಗಿದೆ.

ಈ ಯೋಜನೆ ಆರಂಭದಿಂದ ಹಿಡಿದು, ಲೋಕಾ‍ರ್ಪಣೆಯವರೆಗೂ ಈ ಯೋಜನೆಯ ಭೂಬಳಕೆ ಬದಲಾವಣೆ, ಪರಿಸರ ಅನುಮತಿ, ಉದ್ಘಾಟನೆ ಯಾರು ಮಾಡಬೇಕೆನ್ನುವುದು ಸೇರಿ ಹಲವು ವಿವಾದಗಳು ಅಥವಾ ವ್ಯಾಜ್ಯಗಳು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಡೆದವು. ಕಾನೂನು ಸಮರದ ಹಿನ್ನೋಟ ಇಲ್ಲಿದೆ.

  • ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾದ ಮೊದಲ ಪ್ರಕರಣವೆಂದರೆ, ರಾಜೀವ್ ಸೂರಿ ಮತ್ತು ಅನೂಜ್ ಶ್ರೀವಾಸ್ತವ ಮತ್ತು ಇತರರು ಈ ಯೋಜನೆಗೆ ಭೂಬಳಕೆ ಬದಲಾವಣೆಗೆ ಅನುಮತಿ ಮತ್ತು ಪರಿಸರ ಅನುಮತಿ ನೀಡಿರುವುದನ್ನು ದೆಹಲಿ ನಗರ ಕಲಾ ಆಯೋಗ (ಡಿಯುಎಸಿ) ಮತ್ತು ಭೂಬಳಕೆಯ ಪರಂಪರೆ ಸಂರಕ್ಷಣಾ ಸಮಿತಿಯ ನಿರ್ಧಾರ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ 2020ರಲ್ಲಿ ಅರ್ಜಿ ಸಲ್ಲಿಸಿದ್ದರು. 

  • 2020ರ ಫೆಬ್ರುವರಿ 11ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಶಕ್ದರ್‌ ಅವರಿದ್ದ ಏಕ ಸದಸ್ಯ ಪೀಠ, ಈ ಯೋಜನೆಯಲ್ಲಿ ಯಾವುದೇ ಬದಲಾವಣೆ ಆಗದಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ನಿರ್ದೇಶನ ನೀಡಿತು. 

  • ಇದನ್ನು ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದ ಕೇಂದ್ರ ಸರ್ಕಾರ, ಏಕ ಸದಸ್ಯ ಪೀಠದ ಆದೇಶಕ್ಕೆ 2020ರ ಫೆಬ್ರುವರಿ 28ರಂದು ತಡೆಯಾಜ್ಞೆ ತಂದಿತ್ತು. ನಂತರ ಸುಪ್ರೀಂ ಕೋರ್ಟ್‌, ಈ ಅರ್ಜಿಯನ್ನು ಹೊಸದಾಗಿ ಸಲ್ಲಿಕೆಯಾಗಿದ್ದ ಮತ್ತಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಜತೆಗೆ ಸೇರಿಸಿಕೊಂಡು ವಿಚಾರಣೆ ನಡೆಸಿತು. 

  • 2021ರ ಜ.5ರಂದು ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠವು 2:1ರ ಬಹುಮತದೊಂದಿಗೆ ಸೆಂಟ್ರಲ್‌ ವಿಸ್ತಾ ಪುನರ್‌ ಅಭಿವೃದ್ಧಿ ಯೋಜನೆಗೆ ಹಸಿರು ನಿಶಾನೆ ತೋರಿತು. ಭೂಬಳಕೆ ಬದಲಾವಣೆಗೆ ಅನುಮತಿ ಮತ್ತು ಪರಿಸರ ಅನುಮತಿ ನೀಡಿರುವುದನ್ನು ತೀರ್ಪಿನಲ್ಲಿ ಎತ್ತಿಹಿಡಿಯಿತು. ಈ ಪೀಠದಲ್ಲಿದ್ದ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ಯೋಜನೆ ಅನುಷ್ಠಾನಕ್ಕೆ ಅನುಮತಿಸಿದರೂ, ಭೂಬಳಕೆ ಬದಲಾವಣೆಗೆ ಅನುಮತಿ ಮತ್ತು ಪರಿಸರ ಅನುಮತಿ ನೀಡಿರುವುದನ್ನು ಒಪ್ಪದೇ ಭಿನ್ನಮತದ ತೀರ್ಪು ನೀಡಿದರು.

  • ಭಾಷಾಂತರಕಾರ ಅನ್ಯಾ ಮಲ್ಹೋತ್ರಾ ಮತ್ತು ಇತಿಹಾಸಕಾರ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಸೊಹೈಲ್ ಹಶ್ಮಿ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಇರುವುದರಿಂದ, ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗಾಗಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಕೋರಿ 2021ರ ಏಪ್ರಿಲ್‌ನಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು

  • ದೆಹಲಿ ಹೈಕೋರ್ಟ್ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನು ಒಳಗೊಂಡ ಪೀಠವು, ಇದು ರಾಷ್ಟ್ರೀಯ ಮಹತ್ವದ ಯೋಜನೆ ಎಂದು ಪರಿಗಣಿಸಿ, ಕಾಮಗಾರಿ ಮುಂದುವರಿಸಲು 2021ರ ಮೇ 31ರಂದು ಅವಕಾಶ ಕಲ್ಪಿಸಿತು. ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿ, ಪಿಐಎಲ್‌ ವಜಾಗೊಳಿಸಿತು. ಮೇಲ್ಮನವಿ ಪುರಸ್ಕರಿಸಲು ಮತ್ತು ದಂಡದ ಮೊತ್ತಕ್ಕೆ ತಡೆ ನೀಡಲು ನಿರಾಕರಿಸಿತು.

  • ಹೊಸ ಸಂಸತ್ ಭವನದ ಮೇಲಿರುವ ರಾಷ್ಟ್ರೀಯ ಲಾಂಛನದ ಕಂಚಿನ ಪ್ರತಿಮೆಯಲ್ಲಿ ಸಿಂಹಗಳು ಕೆರಳಿದ ರೂಪದಲ್ಲಿವೆ ಎಂದು, ಈ ವಿನ್ಯಾಸವನ್ನು ಪ್ರಶ್ನಿಸಿ, ವಕೀಲ ಅಲ್‌ಡ್ಯಾನಿಶ್‌ ರೇನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಕಂಚಿನ ಪ್ರತಿಮೆಯು  ‘ಭಾರತದ ರಾಷ್ಟ್ರ ಲಾಂಛನ (ಅಸಮಂಜಸ ಬಳಕೆ ನಿಷೇಧ) ಕಾಯ್ದೆ–2005’ ಉಲ್ಲಂಘಿಸಿಲ್ಲವೆಂದು ಸುಪ್ರೀಂ ಕೋರ್ಟ್‌ ಹೇಳಿತು. 

  • ಇನ್ನು ಕೊನೆಯದಾಗಿ, ನೂತನ ಸಂಸತ್‌ ಭವನವನ್ನು ರಾಷ್ಟ್ರಪತಿಯಿಂದಲೇ ಉದ್ಘಾಟಿಸಲು ಲೋಕಸಭೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಮೂಲದ ವಕೀಲೆ ಸಿ.ಆರ್‌.ಜಯಾ ಸುಕಿನ್‌ ಅವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಯಿತು. 

  • ಉದ್ಘಾಟನೆಗೆ ಎರಡು ದಿನ ಮುಂಚಿತವಾಗಿ, ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಹಾಗೂ ಪಿ.ಎಸ್‌.ನರಸಿಂಹ ಅವರಿದ್ದ ರಜಾಕಾಲದ ಪೀಠವು ಪಿಐಎಲ್‌ ವಜಾಗೊಳಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT