ಭೋಪಾಲ್: ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶದಲ್ಲಿ ಚೀತಾ, ಮಹಿಳೆ, ಬುಡಕಟ್ಟು ಜನಾಂಗ ಸೇರಿದಂತೆ ಯಾರಿಗೂ ರಕ್ಷಣೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕಮಲನಾಥ್ ಬುಧವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದೆಲ್ಲೆಡೆ ಅವ್ಯವಸ್ಥೆ ಇದೆ ಎಂದು ಹೇಳಿದರು.
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ (ಕೆಎನ್ಪಿ) ಮತ್ತೊಂದು ಚೀತಾ ಸಾವನ್ನಪ್ಪಿದ ಕುರಿತು ಪ್ರಶ್ನಿಸಿದಾಗ, ಇಲ್ಲಿ ಚೀತಾ, ಮಹಿಳೆ ಅಥವಾ ಬುಡಕಟ್ಟು ಜನಾಂಗದವರು ಸುರಕ್ಷಿತರಲ್ಲ. ಗುತ್ತಿಗೆದಾರರು ಮತ್ತು ಭ್ರಷ್ಟರನ್ನು ಮಾತ್ರ ಸಂರಕ್ಷಿಸಲಾಗುತ್ತದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ವಾಗ್ದಾಳಿ ನಡೆಸಿದ್ದಾರೆ.
ಚೀತಾ ಅಥವಾ ಬುಡಕಟ್ಟು ಜನಾಂಗದ ಸಮಸ್ಯೆಯೇ ಆಗಿರಲಿ. ಎಲ್ಲಿದೆ ರಕ್ಷಣೆ ? ಮಧ್ಯ ಪ್ರದೇಶ ಈ ದಿಶೆಯತ್ತ ಸಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದರು.
ಕಳೆದ ನಾಲ್ಕು ತಿಂಗಳಲ್ಲಿ ಮೃತಪಟ್ಟ ಚೀತಾಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಚೀತಾಗಳನ್ನು ಮರು ಪರಿಚಯಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗಿದೆ.