ನವದೆಹಲಿ: ತುರ್ತು ಪರಿಸ್ಥಿತಿ, ಗುಜರಾತ್ನಲ್ಲಿನ2002ರ ಗಲಭೆ, ಶೀತಲಸಮರ, ನಕ್ಸಲ್ ಚಳವಳಿ, ಮೊಘಲ್ ಕೋರ್ಟ್ಗೆ ಸಂಬಂಧಿಸಿದ ಪಠ್ಯವನ್ನು ಎನ್ಸಿಇಆರ್ಟಿ 12ನೇ ತರಗತಿ ಪಠ್ಯದಿಂದ ಕೈಬಿಟ್ಟಿದೆ.
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ಹೀಗೆ ಆಯ್ದ ಪಠ್ಯಗಳನ್ನು ಪಠ್ಯಪುಸ್ತಕದಿಂದ ಕೈಬಿಡಲು ‘ಅವು ಅಪ್ರಸ್ತುತ’ ಅಥವಾ ‘ಪುನರಾವರ್ತನೆ’ ಆಗಲಿವೆ ಎಂಬ ಕಾರಣವನ್ನು ನೀಡಿದೆ.
ಪಠ್ಯಪರಿಷ್ಕರಣೆ ಕುರಿತ ತೀರ್ಮಾನವನ್ನು ಈ ವರ್ಷಾರಂಭದಲ್ಲೇ ಪ್ರಕಟಿಸಲಾಗಿತ್ತು. ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲದೆ (ಸಿಬಿಎಸ್ಇ) ಕೆಲವು ರಾಜ್ಯಗಳ ಶಿಕ್ಷಣ ಮಂಡಳಿಗಳು ಕೂಡಾ ಎನ್ಸಿಇಆರ್ಟಿ ಪಠ್ಯಪುಸ್ತಕವನ್ನು ಬಳಸುತ್ತವೆ.
ಎನ್ಸಿಇಆರ್ಟಿ ಈ ಕುರಿತ ಹೇಳಿಕೆಯಲ್ಲಿ, ಪ್ರಮುಖವಾಗಿ ಈ ಪಠ್ಯಗಳನ್ನು ಕೈಬಿಡಲು ಇಂತದೇ ಅಡಕಗಳು ಇತರೆ ತರಗತಿಗಳ ಪಠ್ಯದಲ್ಲಿ ಇದ್ದವು. ಅವು ಪುನರಾವರ್ತನೆ ಆಗುತ್ತಿತ್ತು ಎಂಬ ಕಾರಣ ನೀಡಿದೆ.
12ನೇ ತರಗತಿಯ ರಾಜ್ಯಶಾಸ್ತ್ರ ವಿಷಯದ ಪಠ್ಯಪುಸ್ತಕದಿಂದ ‘ಗುಜರಾತ್ ಗಲಭೆ’ಗೆ ಸಂಬಂಧಿಸಿದ ವಿಷಯವನ್ನು ‘ಭಾರತ ರಾಜಕಾರಣದ ಈಚಿನ ಬೆಳವಣಿಗೆಗಳು’ ಪಠ್ಯದಿಂದ ಕೈಬಿಡಲಾಗಿದೆ. ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರ ‘ರಾಜಧರ್ಮ’ ಕುರಿತ ಹೇಳಿಕೆ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿಯ ಉಲ್ಲೇಖವು ಈ ಅಡಕದಲ್ಲಿ ಇತ್ತು.
ಅಂತೆಯೇ, ಮೊಘಲ್ ಕೋರ್ಟ್ ಪಠ್ಯವನ್ನು ಇತಿಹಾಸ ಪಠ್ಯ ಪುಸ್ತಕದಿಂದ, ದಲಿತ ಚಳವಳಿ ಕುರಿತ ಕವನವನ್ನು ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.
ಅಂತೆಯೇ, 10ನೇ ತರಗತಿ ಪಠ್ಯಪುಸ್ತಕದಿಂದ ಕವಿ ಫೈಜ್ ಅಹಮ್ಮದ್ ಫೈಜ್ ಅವರ ಚರಣಗಳನ್ನು ‘ಧರ್ಮ, ಕೋಮುವಾದ ಮತ್ತು ರಾಜಕಾರಣ’ ವಿಷಯ ಕುರಿತ ಪಾಠವನ್ನು ಪ್ರಜಾಸತ್ತಾತ್ಮಕ ರಾಜಕಾರಣ–2 ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.
ಏಳು, ಎಂಟನೆ ತರಗತಿ ಪಠ್ಯಪುಸ್ತಕದಿಂದ ದಲಿತ ಲೇಖಕ ಓಂಪ್ರಕಾಶ್ ವಾಲ್ಮೀಕಿ ಅವರನ್ನು ಕುರಿತ ಉಲ್ಲೇಖ ಹಾಗೂ ಏಳನೆ ತರಗತಿಯ ಪಠ್ಯಪುಸ್ತಕದಿಂದ ‘ನಮ್ಮ ಹಿನ್ನೆಲೆ–2’ ಪಠ್ಯದಲ್ಲಿ ‘ಅರಸರು: ಪ್ರಮುಖ ಅಭಿಯಾನ ಮತ್ತು ಘಟನೆಗಳು’ ಕುರಿತ ಅಂಶ ಕೈಬಿಡಲಾಗಿದೆ.