ನವದೆಹಲಿ: ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಇ ಹೇಳಿದ್ದಾರೆ.
ಭಾರತೀಯ ಯುವ ವಕೀಲರ ಸಂಘಟನೆಯು ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
‘ಪ್ರಕರಣಗಳು ಇತ್ಯರ್ಥವಾಗದೇ ಉಳಿಯುವುದರಿಂದ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಭಾರಿ ತೊಡಕಾಗುತ್ತದೆ. ನಮ್ಮಲ್ಲಿ ಸಿವಿಲ್ ವ್ಯಾಜ್ಯಗಳು ಇತ್ಯರ್ಥವಾಗುವಷ್ಟರಲ್ಲಿ ಒಂದೆರಡು ತಲೆಮಾರುಗಳು ಕಳೆದಿರುತ್ತವೆ. ಈ ತೊಡಕುಗಳನ್ನೆಲ್ಲಾ ನಿವಾರಿಸಲು ನನ್ನಲ್ಲಿ ಹೊಸ ಯೋಚನೆಯೊಂದಿದೆ. ನೀವೆಲ್ಲರೂ ಅದಕ್ಕೆ ಸಹಕಾರ ನೀಡಿದರೆ ಗುರಿ ಸಾಧಿಸಬಹುದು’ ಎಂದು ಅವರು ಹೇಳಿದ್ದಾರೆ.
‘ಭಾರಿ ಜನಸಂಖ್ಯೆಯ ಭಾರತದಲ್ಲಿ ಬಡತನವೂ ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ನ್ಯಾಯವು ಎಲ್ಲರಿಗೂ ಸಿಗುತ್ತಿಲ್ಲ. ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಪ್ರಯತ್ನಿಸಿದಾಗಲೇ ನನಗೆ ಈ ಸತ್ಯ ಗೊತ್ತಾದದ್ದು. ನ್ಯಾಯಾಂಗವು ಎದುರಿಸುತ್ತಿರುವ ಎರಡನೇ ಬಹುದೊಡ್ಡ ಸಮಸ್ಯೆ ಇದು. ಇದನ್ನು ಪರಿಹರಿಸಲೂ ನನ್ನಲ್ಲಿ ಯೋಜನೆಗಳಿವೆ. ಅವನ್ನು ಶೀಘ್ರವೇ ಬಹಿರಂಗಪಡಿಸಲಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಕ್ಟೋಬರ್ 3ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಗೊಗೊಇ ಅವರು ಅಂದೇ ಅಧಿಕಾರ ಸ್ವೀಕರಿಸಲಿದ್ದಾರೆ.
* ಸರ್ಕಾರದ ಬೇರೆ–ಬೇರೆ ಅಂಗಗಳ ಅಧಿಕಾರವನ್ನು ನ್ಯಾಯಾಂಗವು ಕಸಿದುಕೊಂಡು, ಅವುಗಳ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ. -ರಂಜನ್ ಗೊಗೊಇ, ಸುಪ್ರೀಂ ಕೋರ್ಟ್ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ