ನವದೆಹಲಿ(ಪಿಟಿಐ): ರಾಹುಲ್ ಗಾಂಧಿ ಅವರು ಭಾರತದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ಅವಮಾನಿಸಿದ್ದಾರೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟನ್ನಲ್ಲಿ ರಾಹುಲ್ ಗಾಂಧಿ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದರು. ಸುಳ್ಳು ಮತ್ತು ಆಧಾರ ರಹಿತ ಆರೋಪಗಳನ್ನು ಮಾಡಲು ರಾಹುಲ್ ಗಾಂಧಿ ಬ್ರಿಟನ್ ಸಂಸತ್ತನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ರವಿಶಂಕರ್ ಪ್ರಸಾದ್ ದೂರಿದರು.
‘ನಕ್ಸಲ್ ಚಿಂತನಾಕ್ರಮದ ಹಿಡಿತಕ್ಕೆ ಸಿಲುಕಿರುವ ರಾಹುಲ್, ನಕ್ಸಲರ ಮತ್ತು ಅರಾಜಕತಾವಾದಿ ಶಕ್ತಿಗಳ ಗುಲಾಮರಾಗಿರುವುದು ಸ್ಪಷ್ಟವಾಗಿದೆ’ ಎಂದು ಅವರು ಕಿಡಿಕಾರಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಆಡಳಿತ ಹಾಗೂ ರಾಷ್ಟ್ರೀಯ ಭದ್ರತೆಯನ್ನು ವಿದೇಶಿ ನೆಲದದಲ್ಲಿ ಅವಮಾನಿಸಿದ್ದಾರೆ. ಅವರ ಬೇಜವಾಬ್ದಾರಿ ಹೇಳಿಕೆ ಬಗ್ಗೆ ಕಾಂಗ್ರೆಸ್ ಪಕ್ಷ ವಿವರಣೆ ನೀಡಬೇಕು ಎಂದು ರವಿಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ.
ಬ್ರಿಟನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಥಿತಿ, ಕೇಂದ್ರ ಸರ್ಕಾರದ ಕಾರ್ಯವೈಖರಿ ಮತ್ತು ಆರೆಸ್ಸೆಸ್ ಕುರಿತು ಲಂಡನ್ನಲ್ಲಿ ಟೀಕಿಸಿರುವುದನ್ನು ಬಿಜೆಪಿ ಖಂಡಿಸಿದೆ.