ಲಖನೌ: ನಕ್ಸಲ್ ಚಟುವಟಿಕೆ ನಡೆಸಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ಪಡೆ (ATS) ಮಂಗಳವಾರ ಪ್ರಯಾಗರಾಜ್ನಲ್ಲಿ ದಂಪತಿಯನ್ನು ಬಂಧಿಸಿದೆ.
ಬಂಧಿತರನ್ನು ಕೃಪಾಶಂಕರ್ ಸಿಂಗ್ (49) ಹಾಗೂ ಅವರ ಪತ್ನಿ ಬಿಂದಾ ಸೋನಾ (41) ಎಂದು ಗುರುತಿಸಲಾಗಿದೆ.
ಈ ಇಬ್ಬರ ಮೇಲೆ ನಿಷೇಧಿತ ಸಿಪಿಐ (ಮಾವೊವಾದಿ) ಸಂಘಟನೆಗೆ ಸೇರಿದ್ದ ಕುಂತನ್ ಶ್ರೀನಿವಾಸನ್ ಅವರಿಗೆ ಆಶ್ರಯ ಒದಗಿಸಿರುವ ಹಾಗೂ ವೇತನ ತಾರತಮ್ಯದ ಸಲುವಾಗಿ ಕೇಂದ್ರ ಸರ್ಕಾರದ ವಿರುದ್ಧ ನಕ್ಸಲ್ ಚಳವಳಿ ರೂಪಿಸಿದ್ದ ಆರೋಪ ಇದೆ.
ಕುಂತನ್ ಶ್ರೀನಿವಾಸನ್ ಸುಳಿವು ನೀಡಿದವರಿಗೆ ಉತ್ತರ ಪ್ರದೇಶ ಪೊಲೀಸರು ₹5 ಲಕ್ಷ ಬಹುಮಾನ ಘೋಷಿಸಿದ್ದರು.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಆರೋಪದ ಮೇಲೆ ಏಳು ಜನರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಮಾಡಲಾಗುತ್ತಿದೆ. ಈ ತನಿಖೆಯ ಭಾಗವಾಗಿ ಕೃಪಾಶಂಕರ್ ಸಿಂಗ್ ದಂಪತಿಯನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಕೆಲ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು ನಕ್ಸಲ್ ಚಟುವಟಿಕೆ ಸಂಬಂಧ ಹಲವು ಸುಳಿವು ಲಭಿಸಿವೆ ಎಂದಿದ್ದಾರೆ.
ಕೃಪಾಶಂಕರ್ ಸಿಂಗ್ ಅವರು ಛತ್ತೀಸಗಢದ ರಾಯಪುರದಲ್ಲಿ ಎನ್ಜಿಒ ಒಂದರಲ್ಲಿ ಕೆಲಸ ಮಾಡುವಾಗ ಬಿಂದಾ ಅವರ ಜೊತೆ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿಸಿದ್ದಾರೆ.