ತಿರುವನಂತಪುರಂ:ಕೋವಿಡ್-19 ನಂತರ ಯಾವುದೇ ಬಿಕ್ಕಟ್ಟಿನಿಂದ ಹೊರಬರಲು ಕೇರಳಕ್ಕೆ ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಟ್ವಿಟರ್ ಇಂಡಿಯಾ ಆಯೋಜಿಸಿದ್ದ #AskTheCM ನ ಮೊದಲ ಆವೃತ್ತಿಯಲ್ಲಿ ಮಾತನಾಡಿರುವ ಅವರು, 'ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ನವೀನ ಮಾರ್ಗಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೇರಳ ರಾಜ್ಯವು ಮುಂಚೂಣಿಯಲ್ಲಿದೆ. ಆ ಕಾರಣ, ಇನ್ನು ಮುಂದಿನ ಯಾವುದೇ ಬಿಕ್ಕಟ್ಟನ್ನು ಎದುರಿಸಿ, ಅದರಿಂದ ಹೊರಬರಲು ಕೇರಳಕ್ಕೆ ಸಾಧ್ಯವಾಗಲಿದೆ' ಎಂದು ತಿಳಿಸಿದ್ದಾರೆ.
ಕೇರಳಿಗರು ವಿದೇಶದಿಂದ ಮರಳುತ್ತಿರುವುದು, ಅವರ ಉದ್ಯೋಗ ಸಮಸ್ಯೆ, ಮುಂಬರುವ ಮಳೆಗಾಲ, ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪದ ಸಾಧ್ಯತೆಗಳು ಮತ್ತು ಅದನ್ನು ಎದುರಿಸಲು ರಾಜ್ಯದ ಸಿದ್ಧತೆ ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಪಿಣರಾಯಿ ವಿಜಯನ್ ಉತ್ತರಿಸಿದ್ದಾರೆ.