ಕೊಲಂಬೊ: ಶ್ರೀಲಂಕಾದಲ್ಲಿನ ಸದ್ಯದ ರಾಜಕೀಯ ಬಿಕ್ಕಟ್ಟಿಗೆ ಬಾಹ್ಯ ಮತ್ತು ಸ್ಥಳೀಯ ಮೌಲ್ಯಗಳ ನಡುವಿನ ಸಂಘರ್ಷವೇ ಕಾರಣ ಎಂದು ಹೇಳಿರುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ‘ವಿದೇಶಿ ಶಕ್ತಿಗಳು ನನಗೆ ಬೆದರಿಕೆ ಒಡ್ಡುತ್ತಿವೆ’ ಎಂದು ಆರೋಪಿಸಿದ್ದಾರೆ.
‘ವಿದೇಶಿ ಶಕ್ತಿಗಳಿಗೆ ಅವಕಾಶ ನೀಡದೆ ನಾನು ರಾಷ್ಟ್ರೀಯವಾದದ ತತ್ವಗಳ ಅನುಸಾರ ಕ್ರಮ ಕೈಗೊಂಡಿದ್ದೇನೆ. ಹೀಗಾಗಿ, ಈ ಶಕ್ತಿಗಳು ಸವಾಲಾಗಿ ಪರಿಣಮಿಸಿವೆ. ಹಳೆಯ ಸಾಮ್ರಾಜ್ಯಶಾಹಿ ನಿಲುವಿನ ನೆರಳು ನಮ್ಮ ದಾರಿಯಲ್ಲಿ ನಿಂತಿದೆ’ ಎಂದು ಯಾವುದೇ ದೇಶದ ಹೆಸರು ಹೇಳದೆ ಸಿರಿಸೇನಾ ಆಕ್ಷೇಪಿಸಿದ್ದಾರೆ.
ಸಂಸತ್ತನ್ನು ವಿಸರ್ಜನೆ ಮಾಡಿ ತಾವು ಅಧಿಸೂಚನೆ ಹೊರಡಿಸಿದ್ದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ಧವಿರುವುದಾಗಿ ಅವರು ಹೇಳಿದ್ದಾರೆ.
ಪ್ರಧಾನಿಯಾಗಿದ್ದ ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ ಆ ಹುದ್ದೆಗೆ ಮಹಿಂದಾ ರಾಜಪಕ್ಸೆ ಅವರನ್ನು ಸಿರಿಸೇನಾ ಈ ವರ್ಷದ ಅಕ್ಟೋಬರ್ನಲ್ಲಿ ನೇಮಕ ಮಾಡಿದ ನಂತರ ದೇಶದಲ್ಲಿ ರಾಜಕೀಯ ಸಂಘರ್ಷ ಆರಂಭವಾಗಿದೆ.
‘ಕಾಶ್ಮೀರದ ಜನರಿಗೆ ಪಾಕ್ ಬೆಂಬಲ’
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಜನರಿಗೆ ರಾಜತಾಂತ್ರಿಕ, ರಾಜಕೀಯ ಹಾಗೂ ನೈತಿಕ ಬೆಂಬಲ ನೀಡುವುದನ್ನು ಪಾಕಿಸ್ತಾನ ಮುಂದುವರಿಸುತ್ತದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ತಿಳಿಸಿದ್ದಾರೆ.
ಮಾನವ ಹಕ್ಕುಗಳ ದಿನಾಚರಣೆ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
‘ಇಂದು ಮಾನವ ಹಕ್ಕುಗಳ ಜಾಗತಿಕ ಘೋಷಣೆಯ 70ನೇ ವರ್ಷ ಆಚರಣೆಯ ದಿನ. ಘನತೆ, ಗೌರವ ಯುತ ಜೀವನಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣಬೆಂಬಲ ಇರಲಿದೆ ಎಂದು ಈ ದಿನ ಪುನರುಚ್ಚರಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.