ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷಣಾ ಜಾಮೀನು: ಹೈಕೋರ್ಟ್‌ಗಳ ಪ್ರವೃತ್ತಿಗೆ 'ಸುಪ್ರೀಂ' ಅಸಮಾಧಾನ

Last Updated 27 ಅಕ್ಟೋಬರ್ 2022, 12:33 IST
ಅಕ್ಷರ ಗಾತ್ರ

ನವದೆಹಲಿ: ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂಬ ಅಂಶವನ್ನಷ್ಟೇ ಪರಿಗಣಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಹೈಕೋರ್ಟ್‌ಗಳ ಪ್ರವೃತ್ತಿ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠವು, ‘ಆರೋಪಿಯನ್ನು ವಶಕ್ಕೆ ನೀಡುವಂತೆ ಕೋರದಿರುವ ಅಂಶವನ್ನೇ ಆಧರಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗುತ್ತದೆ. ಇದು, ಕಾನೂನಿನ ಗಂಭೀರವಾದ ತಪ್ಪುಗ್ರಹಿಕೆ’ ಎಂದೂ ಹೇಳಿದೆ.

ನಿರೀಕ್ಷಣಾ ಜಾಮೀನು ಕುರಿತ ಹಲವು ಪ್ರಕರಣಗಳಲ್ಲಿ ಇದನ್ನು ನಾವು ಗಮನಿಸಿದ್ದೇವೆ. ಇದು ತಪ್ಪುಗ್ರಹಿಕೆ. ವಿಚಾರಣೆಗಾಗಿ ವಶಕ್ಕೆ ನೀಡಿಲ್ಲ ಎಂಬುದು ಒಂದು ಕಾರಣ. ನಿರೀಕ್ಷಣಾ ಜಾಮೀನು ನೀಡಲು ಇತರೆ ಅಂಶಗಳನ್ನು ಪರಿಗಣಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.

ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣದ ಪ್ರಮುಖ ಸ್ವರೂಪವನ್ನೇ ಮೇಲ್ನೋಟಕ್ಕೆ ಪ್ರಧಾನವಾಗಿ ಪರಿಗಣಿಸಿ ನಿರೀಕ್ಷಣಾ ಜಾಮೀನು ನೀಡುವುದನ್ನು ತೀರ್ಮಾನಿಸಬೇಕು ಎಂದೂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

‘ಇನ್ನು ಮುಂದೆ ಅಪರಾಧದ ಸ್ವರೂಪ ಹಾಗೂ ವಿಧಿಸಬಹುದಾದ ಶಿಕ್ಷೆಯ ಪ್ರಮಾಣವನ್ನೂ ಗಮನಿಸಬೇಕು. ವಿಚಾರಣೆಗೆ ವಶಕ್ಕೆ ಪಡೆಯುವ ಅಗತ್ಯವಿಲ್ಲದಿರುವುದೇ ನಿರೀಕ್ಷಣಾ ಜಾಮೀನು ನೀಡಲು ಮಾನದಂಡವಾಗಬಾರದು’ ಎಂದು ಪೀಠ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದ, ಕೇರಳದ ವಯನಾಡ್ ಜಿಲ್ಲೆ ಆರೋಪಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ಅನ್ನು ಪೀಠ ಇದೇ ಸಂದರ್ಭದಲ್ಲಿ ರದ್ದುಪಡಿಸಿತು. ‘ಹೈಕೋರ್ಟ್‌ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವ ಅಗತ್ಯವಿರಲಿಲ್ಲ. ಜಾಮೀನು ನೀಡುವ ಮುನ್ನ ಎಫ್‌ಐಆರ್‌ನಲ್ಲಿದ್ದ ನಿರ್ದಿಷ್ಟ ಆರೋಪಗಳನ್ನು ಪರಿಗಣಿಸಿಲ್ಲ’ ಎಂದು ಪೀಠವು ಹೇಳಿತು.

‘ಗಂಭೀರ ಸ್ವರೂಪದ ಆರೋಪಗಳಿರುವಾಗ ನಿರೀಕ್ಷಣಾ ಜಾಮೀನು ನೀಡುವ ತನ್ನ ವಿವೇಚನೆಯನ್ನು ಹೈಕೋರ್ಟ್‌ ಬಳಸಬೇಕು. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ತನಿಖಾಧಿಕಾರಿಗೆ ಮುಕ್ತ ಅವಕಾಶ ಅಗತ್ಯವಾಗಿದೆ’ ಎಂದೂ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT