ಚಂಡಮಾರುತದ ಅಬ್ಬರಕ್ಕೆ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, ಮತ್ತೆ ಕೆಲವೆಡೆ ಭಾರಿ ಗಾತ್ರದ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಗುಜರಾತ್ ಕರಾವಳಿಯ ಪ್ರದೇಶಗಳು ಕತ್ತಲಿನಲ್ಲಿ ಮುಳುಗಿವೆ.
ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಗಾಳಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಜನರು ಹೊರಬರಲಾಗದೇ ತೊಂದರೆ ಅನುಭವಿಸುವಂತಾಗಿದೆ.
ಗುಜರಾತ್ನ ಕರಾವಳಿ ಪ್ರದೇಶಗಳಾದ ಗಿರ್ ಸೋಮನಾಥ್, ಅಮ್ರೇಲಿ, ಜುನಾಗಡ್ ಮತ್ತು ಭಾವ್ನಗರ್ನಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿದ್ದರು. ಚಂಡಮಾರುತದ ಅಬ್ಬರ ಆರಂಭವಾಗುತ್ತಿದ್ದಂತೆ ತೀರದ ಪ್ರದೇಶಗಳಲ್ಲಿ ಜನರು ಸಮಸ್ಯೆ ಎದುರಿಸುವಂತಾಗಿದೆ.
ಗುಜರಾತ್ನಲ್ಲಿ ತೌತೆ ಚಂಡಮಾರುತಕ್ಕೆ ಸಿಲುಕಿ ಗಾಯಗೊಂಡಿರುವ ಮತ್ತು ಜೀವಹಾನಿಯ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ವರದಿಗಳು ಹೇಳಿವೆ.
ದಕ್ಷಿಣದಲ್ಲಿ ಕೇರಳದಿಂದ ಆರಂಭವಾಗಿದ್ದ ತೌತೆ ಚಂಡಮಾರುತ, ನಂತರ ಕರ್ನಾಟಕದ ಕರಾವಳಿ ಮೂಲಕ ಮಹಾರಾಷ್ಟ್ರ ಪ್ರವೇಶಿಸಿತ್ತು. ಅದಾದ ಬಳಿಕ ಸೋಮವಾರ ರಾತ್ರಿ 11.30ರ ಹೊತ್ತಿಗೆ ಗುಜರಾತ್ನ ಸೌರಾಷ್ಟ್ರ ಪ್ರವೇಶಿಸಿದೆ.
ತೌತೆ ಪರಿಣಾಮ ರಾಜ್ಯದಲ್ಲಿ ಎರಡು ದಿನಗಳ ಮಳೆ, ಗಾಳಿಯ ಆರ್ಭಟ ಜೋರಾಗಿ, ಏಳು ಜಿಲ್ಲೆಗಳ 121 ಗ್ರಾಮಗಳಲ್ಲಿ ಹಾನಿ ಸಂಭವಿಸಿತ್ತು. ಅಲ್ಲದೆ, ಮಹಾರಾಷ್ಟ್ರದಲ್ಲಿ 6 ಮಂದಿ ಸಾವಿಗೀಡಾಗಿದ್ದರು.