ಚಂಡೀಗಢ: ನೆರೆಯ ದೆಹಲಿ ಹಾಗೂ ಹರಿಯಾಣದಲ್ಲಿ ವಾಯು ಗುಣಮಟ್ಟ ತೀರಾ ಕಳಪೆ ಮಟ್ಟಕ್ಕೆ ಕುಸಿಯುತ್ತಿರುವುದರ ನಡುವೆ ಪಂಜಾಬ್ನಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಟ್ಟ 1,200ಕ್ಕೂ ಅಧಿಕ ಪ್ರಕರಣಗಳು ಗುರುವಾರ ಒಂದೇ ದಿನ ವರದಿಯಾಗಿವೆ.
ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಪೊಲೀಸರು, ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ವೈಮಾನಿಕ ತಂಡಗಳೂ ನಿಗಾ ವಹಿಸುತ್ತಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದೆ. ಹೀಗಾಗಿ, 'ಜನರು ಸಾಯಲು ಬಿಡುವುದಿಲ್ಲ' ಎಂದಿರುವ ಸುಪ್ರೀಂ ಕೋರ್ಟ್, ನೆರೆ ರಾಜ್ಯಗಳಾದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೃಷಿ ತ್ಯಾಜ್ಯ ಸುಡುವುದನ್ನು ತಕ್ಷಣವೇ ನಿಯಂತ್ರಿಸುವಂತೆ ನವೆಂಬರ್ 7ರಂದು ನಿರ್ದೇಶನ ನೀಡಿದೆ.
ಆದಾಗ್ಯೂ, ಕೃಷಿ ತ್ಯಾಜ್ಯ ಸುಡುವುದು ಕಡಿಮೆಯಾಗಿಲ್ಲ.
31,932 ಪ್ರಕರಣ
ಪಂಜಾಬ್ನಲ್ಲಿ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಇಟ್ಟ ಒಟ್ಟು 1,271 ಪ್ರಕರಣಗಳು ಗುರುವಾರ ವರದಿಯಾಗಿವೆ.
ಪಂಜಾಬ್ ರಿಮೋಟ್ ಸೆನ್ಸಿಂಗ್ ಸೆಂಟರ್ ನೀಡಿರುವ ಮಾಹಿತಿ ಪ್ರಕಾರ, ಮೊಗಾ ಜಿಲ್ಲೆಯಲ್ಲಿ ಗರಿಷ್ಠ (237) ಪ್ರಕರಣಗಳು ಕಂಡುಬಂದಿವೆ. ಬಥಿಂಡ (170), ಬರ್ನಾಲಾ (145), ಸಂಗ್ರೂರ್ (129), ಫರೀದ್ಕೋಟ್ (113) ಹಾಗೂ ಲೂಧಿಯಾನ (110) ನಂತರದ ಸ್ಥಾನಗಳಲ್ಲಿವೆ.
ಸೆಪ್ಟಂಬರ್ 15ರಿಂದ ನವೆಂಬರ್ 16ರ ವರೆಗೆ ಒಟ್ಟು 31,932 ಪ್ರಕರಣಗಳು ವರದಿಯಾಗಿವೆ. ಸಂಗ್ರೂರ್ ಜಿಲ್ಲೆಯಲ್ಲಿ ಒಟ್ಟು 5,352 ಪ್ರಕರಣಗಳು ಕಂಡುಬಂದಿವೆ. ಫಿರೋಜ್ಪುರದಲ್ಲಿ 2,884, ಬಥಿಂಡದಲ್ಲಿ 2,587 ಹಾಗೂ ಮನ್ಸಾ ಜಿಲ್ಲೆಯಲ್ಲಿ 2,178 ಪ್ರಕರಣ ಬೆಳಕಿಗೆ ಬಂದಿವೆ.
ಪಂಜಾಬ್ ಹಾಗೂ ಹರಿಯಾಣದಲ್ಲಿ ಭತ್ತದ ಕಟಾವಿನ ಬಳಿಕ ಉಳಿದ ತ್ಯಾಜ್ಯವನ್ನು ಸುಡುವುದು ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಲು ಪ್ರಮುಖ ಕಾರಣವಾಗಿದೆ.