ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಚಲೋ l ಪ್ರತಿಭಟನೆಯ ಬಿರುಸು ಒಪ್ಪಿದ ಕೇಂದ್ರ: ರೈತ ಮುಖಂಡರ ಪ್ರತಿಪಾದನೆ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
Published 7 ಮಾರ್ಚ್ 2024, 4:37 IST
Last Updated 7 ಮಾರ್ಚ್ 2024, 4:37 IST
ಅಕ್ಷರ ಗಾತ್ರ

ಚಂಡೀಗಢ/ ನವದೆಹಲಿ: ರೈತರು ದೆಹಲಿ ಪ್ರವೇಶಿಸುವುದನ್ನು ತಡೆಯುವ ಉದ್ದೇಶದಿಂದ ದೆಹಲಿಯ ಸುತ್ತ ಪೊಲೀಸರನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸುವ ಮೂಲಕ ಕೇಂದ್ರ ಸರ್ಕಾರವು ರೈತರ ಹೋರಾಟವು ರಾಷ್ಟ್ರದಾದ್ಯಂತ ನಡೆ ಯುತ್ತಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ರೈತ ಮುಖಂಡ ಸರವಣ್ ಸಿಂಗ್ ಪಂಢೇರ್ ಹೇಳಿದರು.

ದೆಹಲಿಯ ಕಡೆ ಸಾಗುತ್ತಿದ್ದ 100ಕ್ಕೂ ಹೆಚ್ಚು ರೈತರನ್ನು ರಾಜಸ್ಥಾನ ದಲ್ಲಿ ಬಂಧಿಸಲಾಗಿದೆ ಎಂದು ಪಂಢೇರ್ ತಿಳಿಸಿದರು. ರೈತರು ರಾಷ್ಟ್ರದ ಎಲ್ಲೆಡೆಗಳಿಂದ ರಾಜಧಾನಿ ದೆಹಲಿಗೆ ಮಾರ್ಚ್‌ 6ರಂದು ತಲುಪಬೇಕು ಎಂದು ಪಂಢೇರ್ ಮತ್ತು ಇನ್ನೊಬ್ಬ ರೈತ ಮುಖಂಡ ಜಗಜೀತ್ ಸಿಂಗ್ ಡಲ್ಲೇವಾಲ್ ಕರೆ ನೀಡಿದ್ದರು.

ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆಯನ್ನು ನೀಡಬೇಕು ಎಂಬ ಬೇಡಿಕೆಯೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಸಂಘ ‘ದೆಹಲಿ ಚಲೋ’ ಹೋರಾಟ ಆರಂಭಿಸಿವೆ.

‘ದೂರದ ರಾಜ್ಯಗಳ ರೈತರು ದೆಹಲಿಗೆ ರೈಲು ಅಥವಾ ಇತರ ಮಾರ್ಗಗಳ ಮೂಲಕ ತಲುಪಬಹುದು ಎಂದು ನಾವು ತೀರ್ಮಾನಿಸಿದ್ದೆವು. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದು ನಮ್ಮ ಆಲೋಚನೆ. ಆದರೆ, ಈ ಪ್ರತಿಭಟನೆಯು ಪಂಜಾಬ್‌ಗೆ ಸೀಮಿತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಇತ್ತು. ಹಾಗಿದ್ದರೆ, ಜಂತರ್ ಮಂತರ್‌ನಲ್ಲಿ ಹಾಗೂ ದೆಹಲಿಯ ಇತರ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಹೊರಡಿಸಿರುವುದು ಏಕೆ ಎಂಬುದು ನಮಗೆ ಗೊತ್ತಾಗಬೇಕು. ಟಿಕ್ರಿ ಹಾಗೂ ಸಿಂಘು ಗಡಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬ್ಯಾರಿಕೇಡ್ ಹಾಕಿರುವುದು ಏಕೆ? ಇದರ ಅರ್ಥ ಈ ಪ್ರತಿಭಟನೆಯು ದೇಶದಾದ್ಯಂತ ನಡೆಯುತ್ತಿದೆ ಎಂಬುದನ್ನು ಕೇಂದ್ರವು ಒಪ್ಪಿಕೊಂಡಿದೆ’ ಎಂದು ಅವರು ಹೇಳಿದರು.

‘ಹೀಗಾಗಿಯೇ ಅವರು ಇಷ್ಟೊಂದು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ, ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಹಾಗೆಯೇ, ರೈತರು ದೆಹಲಿಗೆ ಬರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ’ ಎಂದರು.

ನವದೆಹಲಿಯಲ್ಲಿ ಸಂಚಾರ ದಟ್ಟಣೆ: ರೈತರ ಪ್ರತಿಭಟನೆಯಿಂದಾಗಿ ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಪೊಲೀಸರು ಹೇಳಿದರು.

ವರದಿಗಳ ಪ್ರಕಾರ, ಬೆಳಿಗ್ಗೆಯಿಂದಲೇ ದೆಹಲಿ–ಹರಿಯಾಣ ಮಾರ್ಗದ ಸಿಂಘು ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಗಳು, ರೈಲು ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ಭಾರಿ ನಿಗಾ ವಹಿಸಲಾಗಿದೆ. ಎಲ್ಲಾ ಗಡಿಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗಡಿ ಅಥವಾ ರಸ್ತೆಯನ್ನು ಮುಚ್ಚಿಲ್ಲ. ಬದಲಾಗಿ ವಾಹನ ತಪಾಸಣೆ ನಡೆಸ ಲಾಗುತ್ತಿದೆ ಎಂದು ಹೇಳಿದರು.

ದೆಹಲಿಯಲ್ಲಿ 144ನೇ ಸೆಕ್ಷನ್‌ ಅಡಿಯಲ್ಲಿ ನಿಷೇಧಾಜ್ಞೆಯನ್ನು ಈಗಾಗಲೇ ಜಾರಿ ಮಾಡಲಾಗಿದೆ. ಜನರು ಗುಂಪುಗೂಡಲು ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

ರೈತರು ಬುಧವಾರ ರಾಷ್ಟ್ರ ರಾಜಧಾನಿ ತಲುಪಬೇಕು ಎಂದು ಕಿಸಾನ್‌ ಮಜ್ದೂರ್‌ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಭಾನುವಾರ ಕರೆ ನೀಡಿದ್ದವು.

ಮಹಿಳಾ ದಿನಾಚರಣೆಯ ಅಂಗವಾಗಿ ಮಾ.8ರಂದು ಶಂಭು , ಖಾನೌರಿ ಗಡಿಗಳಲ್ಲಿ ಮಹಿಳಾ ರೈತರು ಕೂಡ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ
–ಸರವಣ್ ಸಿಂಗ್ ಪಂಢೇರ್, ರೈತ ಮುಖಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT