ಚಂಡೀಗಢ: ರಾಷ್ಟ್ರರಾಜಧಾನಿಯಲ್ಲಿ ರೈತರು ನಡೆಸುತ್ತಿರುವ 'ದೆಹಲಿ ಚಲೋ' ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಹಾಗೂ ಎಸ್ಎಂಎಸ್ ಸೇವೆಯನ್ನು ಫೆಬ್ರುವರಿ 15ರ ವರೆಗೆ ನಿರ್ಬಂಧಿಸಲಾಗಿದೆ.
'ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನಿನ ಖಾತರಿ' ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಜಾ ಕರೆ ನೀಡಿರುವ 'ದೆಹಲಿ ಚಲೊ' ಪ್ರತಿಭಟನಾ ಮೆರವಣಿಗೆ ಮಂಗಳವಾರ ಆರಂಭವಾಗಿದೆ. ಪ್ರತಿಭಟನೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದಾರೆ.
ಹರಿಯಾಣ ಗಡಿ ಪ್ರದೇಶಗಳಲ್ಲಿ ಪೊಲೀಸರು ಅಳವಡಿಸಿರುವ ಬ್ಯಾರಿಕೇಡ್ಗಳನ್ನು ದಾಟಿ, ದೆಹಲಿಗೆ ನುಗ್ಗಲು ಪ್ರಯತ್ನಿಸಿದ ರೈತರನ್ನು ತಡೆಯಲು ಪೊಲೀಸರು ಮಂಗಳವಾರ ಅಶ್ರುವಾಯು ಸಿಡಿಸಿದರು.
ಎರಡನೇ ದಿನವೂ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರವು ಗಡಿ ಜಿಲ್ಲೆಗಳಾದ ಅಂಬಾಲ, ಕುರುಕ್ಷೇತ್ರ, ಕೈತಾಲ್, ಸಿಂದ್, ಹಿಸಾರ್, ಫತೇಹಬಾದ್ ಮತ್ತು ಸಿರ್ಸಾದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದೆ.