ನವದೆಹಲಿ: ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವುದು ಹಾಗೂ ಭಯದ ವಾತಾವರಣ ನಿರ್ಮಿಸುವಂತಹ ಭಾಷಣಗಳಿರುವ ವಿಡಿಯೊಗಳನ್ನು ಹಂಚಿಕೊಳ್ಳುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಮಹಿಳಾ ವಕೀಲರ ವೇದಿಕೆ ಒತ್ತಾಯಿಸಿದೆ.
ಈ ಕುರಿತು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ವೇದಿಕೆಯು ಪತ್ರ ಬರೆದಿದೆ.
ನೂಹ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗಳ ಹಿನ್ನೆಲೆಯಲ್ಲಿ ಬರೆದಿರುವ ಈ ಪತ್ರಕ್ಕೆ 101 ವಕೀಲೆಯರು ಸಹಿ ಹಾಕಿದ್ದಾರೆ.
‘ಯಾವುದೇ ಸಮುದಾಯ, ಪೂಜಾ ಸ್ಥಳಗಳಿಗೆ ಬೆದರಿಕೆ ಒಡ್ಡುವ ಅಥವಾ ಆರ್ಥಿಕ ಬಹಿಷ್ಕಾರಕ್ಕೆ ಒತ್ತಾಯಿಸುವ ವಿಡಿಯೊಗಳನ್ನು ಪತ್ತೆ ಮಾಡಬೇಕು ಹಾಗೂ ನಿಷೇಧಿಸಬೇಕು ಎಂಬುದಾಗಿ ಹರಿಯಾಣ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಲಾಗಿದೆ.