ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಖಾಸಗಿ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ದೆಹಲಿ ಸರ್ಕಾರದ ಜಾಗೃತದಳದ ನಿರ್ದೇಶನಾಲಯ ವಜಾಗೊಳಿಸಿದೆ.
19 ವರ್ಷಗಳ ಹಳೆಯ ಪ್ರಕರಣವನ್ನು ಉಲ್ಲೇಖಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಮತ್ತು ಬೆದರಿಕೆ ಹಾಕಿದ್ದ ಆರೋಪ ಅವರ ಮೇಲಿದೆ.
ಬಿಭವ್ ಕುಮಾರ್ ಅವರು ಕೇಜ್ರಿವಾಲ್ ಅವರಿಗೆ ಸರ್ಕಾರೇತರ ಸಂಸ್ಥೆ ಸ್ಥಾಪಿಸಿದ ದಿನಗಳಿಂದಲೂ ಆಪ್ತ ಸಹಾಯಕರಾಗಿದ್ದವರು. ಎರಡು ದಿನಗಳ ಹಿಂದೆಯಷ್ಟೇ ದೆಹಲಿ ಅಬಕಾರಿ ನೀತಿ ಹಗರಣದ ಜತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇದರ ಬೆನ್ನಲ್ಲೆ ಅವರನ್ನು ವಜಾಗೊಳಿಸಲಾಗಿದೆ.
ಸರ್ಕಾರೇತರ ವ್ಯಕ್ತಿಗಳನ್ನು ಸಚಿವರ ವೈಯಕ್ತಿಕ ಸಿಬ್ಬಂದಿಯಾಗಿ ನೇಮಿಸುವುದಕ್ಕೂ ಮೊದಲು ಅವರ ಗುಣ, ಸ್ವಭಾವ, ಪೂರ್ವಾಪರ ಪರಿಶೀಲನೆ ಮಾಡಬೇಕು ಎಂಬ ಕೇಂದ್ರ ಸರ್ಕಾರದ ನಿಯಮವನ್ನು ಇಲಾಖೆಯು ಆದೇಶದಲ್ಲಿ ಉಲ್ಲೇಖಿಲಿಸಿದೆ.
2007ರ ಜೂನ್ 1ರಂದು ನೋಯ್ಡಾ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಕುಮಾರ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಮೊಕದ್ದಮೆ ಹೂಡಿದ್ದರು.
ದೆಹಲಿ ಮುಖ್ಯಮಂತ್ರಿಯ ಖಾಸಗಿ ಕಾರ್ಯದರ್ಶಿಯ ನೇಮಕವು ‘ಕಾನೂನು ಬಾಹಿರ’ ಎಂಬುದನ್ನು ಗಮನಿಸಿದ ನಿರ್ದೇಶನಾಲಯವು ಕಳೆದ ವರ್ಷದ ನವೆಂಬರ್ನಲ್ಲಿ ಕುಮಾರ್ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು.
ಕುಮಾರ್ ಅವರ ನೇಮಕಾತಿ ಕಾನೂನು ಬಾಹಿರವಾಗಿದ್ದು, ಅವರು ವಿವಿಧ ಏಜೆನ್ಸಿಗಳ ಅಡಿ ವಿಚಾರಣೆಗೆ ಒಳಪಟ್ಟಿರುವ ಕಾರಣ ಅವರನ್ನು ಹುದ್ದೆಯಿಂದ ತೆಗೆದುಹಾಕುವುದು ಅತ್ಯಗತ್ಯವಾಗಿತ್ತು ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ಈ ಆದೇಶವನ್ನು ಪ್ರಶ್ನಿಸುವುದಾಗಿ ಎಎಪಿ ಮೂಲಗಳು ತಿಳಿಸಿವೆ.
‘ಕುಮಾರ್ ಅವರನ್ನು ವಜಾಗೊಳಿಸಿರುವುದು ನಿಷ್ಪಕ್ಷಪಾತ ತನಿಖೆಗೆ ದಾರಿ ಮಾಡಿಕೊಡುತ್ತದೆ’ ಎಂದು ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷ ಕಪಿಲ್ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ. ಕಾರ್ಯದರ್ಶಿ ಹರೀಶ್ ಖುರಾನಾ ಅವರು, ‘ಕುಮಾರ್ ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ನಡೆಯದ ಕಾರಣ ಅವರನ್ನು ತೆಗೆದಿರುವುದು ಆಡಳಿತಾತ್ಮಕ ನಿರ್ಧಾರವಾಗಿದೆ’ ಎಂದಿದ್ದಾರೆ.
Directorate of Vigilance (DoV) terminates the services of Bibhav Kumar- private secretary to Delhi Chief Minister Arvind Kejriwal. pic.twitter.com/3eeZxXn0Jv
— ANI (@ANI) April 11, 2024
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.