ಚೆನ್ನೈ: ದೇಶದಲ್ಲಿ ಅಕ್ರಮ ಗಣಿಗಾರಿಕೆ ಪರಿಶೀಲನೆ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣೆಯಲ್ಲಿ ಡ್ರೋನ್ಗಳು ಮಹತ್ವದ ಪಾತ್ರ ನಿರ್ವಹಿಸಲಿವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಂಗಳವಾರ ಹೇಳಿದ್ದಾರೆ.
ಡ್ರೋನ್ ತಂತ್ರಜ್ಞಾನದಲ್ಲಿ ಯುವಕರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರಂತರ ಹೂಡಿಕೆ ಮಾಡುತ್ತಿದೆ. ಭಾರತವು ವಿಶ್ವದ ಡ್ರೋನ್ ಹಬ್ ಆಗುವ ಹಾದಿಯಲ್ಲಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವರು ಹೇಳಿದರು.
‘ಮುಂದಿನ ದಿನಗಳಲ್ಲಿ ಅಕ್ರಮ ಗಣಿಗಾರಿಕೆ ಪರಿಶೀಲನೆಗೆ ಡ್ರೋನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ನಮ್ಮ ನೈಸರ್ಗಿಕ ಸಂಪನ್ಮೂಲ ರಕ್ಷಣೆಯಲ್ಲಿ ಡ್ರೋನ್ ತಂತ್ರಜ್ಞಾನ ದೊಡ್ಡ ಪಾತ್ರ ವಹಿಸಲಿದೆ’ಎಂದು ಅವರು ಹೇಳಿದರು.
ತಲಂಬೂರ್ನ ಅಗ್ನಿ ತಾಂತ್ರಿಕ ಕಾಲೇಜಿನಲ್ಲಿ ಗರುಡಾ ಏರೊಸ್ಪೇಸ್ ಆಯೋಜಿಸಿದ್ದ ಪ್ರಥಮ ಡ್ರೋನ್ ಕೌಶಲ್ಯ ಮತ್ತು ತರಬೇತಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೋವಿಡ್ ಕಾಲದಲ್ಲಿ ಔಷಧಿ ಮತ್ತು ಲಸಿಕೆ ಸಾಗಿಸಲು ಡ್ರೋನ್ ಬಳಕೆಯನ್ನು ಮೆಲುಕು ಹಾಕಿದರು.
ಇತ್ತೀಚೆಗೆ, ಕ್ರಿಕೆಟ್ ಪಂದ್ಯಗಳ ನೇರಪ್ರಸಾರ ಚಿತ್ರೀಕರಣಕ್ಕೆ ಕ್ರೀಡಾಂಗಣದಲ್ಲಿ ಡ್ರೋನ್ ಕ್ಯಾಮೆರಾ ಬಳಕೆಗೆ ನಾಗರಿಕ ವಿಮಾನಯಾನ ಸಚಿವಾಲಯವು ಭಾರತೀಯ ಕ್ರಿಕೆಟ್ ಮಂಡಳಿಗೆ(ಬಿಸಿಸಿಐ) ಅವಕಾಶ ನೀಡಿತ್ತು.